ಉಡುಪಿ: ಡಿ.28 - 31 ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ - ಜಿಲ್ಲೆಯಲ್ಲಿ ಜಾಗೃತಿ-ಸ್ತಬ್ಧಚಿತ್ರ ರಥಯಾತ್ರೆ

ಉಡುಪಿ: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಸಮಿತಿಯು ರಾಜ್ಯಾದ್ಯಂತ ಯುವ ಸಮುದಾಯದ ಭವಿಷ್ಯ, ಆರೋಗ್ಯ ಮತ್ತು ಸಾಮರ್ಥ್ಯವನ್ನು ಬಲಪಡಿಸುವ ಗಂಭೀರ ಜವಾಬ್ದಾರಿ ಹೊಂದಿದೆ. ವಿನಾಶಕಾರಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಮಹತ್ವಾಕಾಂಕ್ಷಿ ಪ್ರಯತ್ನದೊಂದಿಗೆ - 'ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ" ಸ್ತಬ್ಧಚಿತ್ರ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸಲಿದೆ.ಈ ರಥಯಾತ್ರೆಯು ಉಡುಪಿ ಜಿಲ್ಲೆಯಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಿದೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ‌ ಮಾತನಾಡಿದ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ,ದೇಶದ ಬಲಿಷ್ಠ ಶಕ್ತಿಯಾದ ಯುವಕರನ್ನು ಮಾದಕ ಡ್ರಗ್ಸ್ ಮೂಲಕ ದಾರಿತಪ್ಪಿಸಿ ನಿಶ್ಯಕ್ತರನ್ನಾಗಿಸುವ ದುಷ್ಕೃತ್ಯದ ವಿರುದ್ಧ ಸಮಾಜದ ಪ್ರತಿಯೊಬ್ಬ ನಾಗರಿಕ ಎಚ್ಚರಿಕೆಯಿಂದ ಮುಂದಡಿ ಇಡಬೇಕಿದೆ. ಈ ನಿಟ್ಟಿನಲ್ಲಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಯುವ ಜನತೆಗೆ ಜಾಗೃತಿ ಮೂಡಿಸಬೇಕಿದೆ.ಶಾಲೆಗಳಿಗೆ ಕಾರ್ಯಕ್ರಮ ನಿಮಿತ್ತ ಹೋಗುತ್ತೇನೆ.ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಡ್ರಗ್ಸ್ ಗೆ ಬಲಿಯಾಗುವ ಬಗ್ಗೆ ಕೇಳಿದ್ದೇನೆ. ಆಸ್ಪತ್ರೆಗೂ ಡ್ರಗ್ಸ್ ವ್ಯಸನ ದಿಂದ ಮಾನಸಿಕ ಸಮಸ್ಯೆಗಳನ್ನು ಎದುರಿಸಿ ಬರುತ್ತಾ ಇರುತ್ತಾರೆ.ಲೀಗಲ್ ಡ್ರಗ್ಸ್ ಎನಿಸಿಕೊಂಡಿರುವ ತಂಬಾಕು ಮತ್ತು ಮದ್ಯಪಾನದ ಮೂಲಕ ಈ ವಿದ್ಯಾರ್ಥಿಗಳು ಇದರ ಚಕ್ರವ್ಯೂಹಕ್ಕೆ ಬಿದ್ದು ಒದ್ದಾಡುತ್ತಾರೆ. ಅವರಿಗೆ ಪ್ರಾರಂಭದಲ್ಲಿಯೇ ಅದರ ಬಗ್ಗೆ ಜಾಗೃತಿ ಮೂಡಿಸಿದರೆ ಅವರು ಡ್ರಗ್ಸ್ ಗೆ ಬಲಿಯಾಗುವುದನ್ನು ತಡೆಯಬಹುದು ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಶಾಲೆ ಕಾಲೇಜು ಆವರಣ ಮತ್ತು ಬಸ್ ನಿಲ್ದಾಣಗಳಲ್ಲಿ ಜಾಗೃತಿ ಮೂಡಿವ ಕೆಲಸವನ್ನು ಮಾಡುತ್ತಿದ್ದೇವ.ಈ ಕಾರ್ಯಕ್ರಮಕ್ಕೆ ನಾಗರಿಕರು ವಿದ್ಯಾರ್ಥಿಗಳು ಮತ್ತು ಪ್ರಜ್ಞಾವಂತ ಸಾರ್ವಜನಿಕರು ಸಹಕಾರ ನೀಡಬೇಕು.ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ನಾವು ಕೂಡ ಜಾಗೃತಿ ಮೂಡಿಸಿದರೆ ಆದಷ್ಟು ಯುವ ಜನರನ್ನು ಅದರಿಂದ ದೂರ ಮಾಡಲು ಸಾಧ್ಯವಿದೆ ಎಂದು ಹೇಳಿದರು.ಉಡುಪಿಯಲ್ಲಿ ಡಿ.28, 29, 30 ಮತ್ತು 31  ರಂದು ನಗರದ ಆಯ್ದ ಕೇಂದ್ರಗಳು ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ನಂತರ ಅಂತಿಮ ಸಮಾರೋಪ ಜನವರಿ 19 ರಂದು ಬೆಂಗಳೂರಿನಲ್ಲಿ ಜರುಗಲಿದೆ ಎಂದವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಅಜಯ್ ಪಿ. ಶೆಟ್ಟಿ ,ಡಾ.ವಿಜಯೇಂದ್ರ ರಾವ್ ,ಬಾಲಕೃಷ್ಣ ಎಸ್ ಮದ್ದೋಡಿ ,ಸತೀಶ್ ಸಾಲಿಯಾನ್ ಮತ್ತು ರವಿರಾಜ್ ಸುವರ್ಣ ಉಪಸ್ಥಿತರಿದ್ದರು.