ಉಡುಪಿ: ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡವೂರು ಗ್ರಾಮದ ನಾಗಬನದ ಸಮೀಪ ನಡೆದ ಎಕೆಎಂಎಸ್ ಬಸ್ ಮಾಲಕ ಸೈಪುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸೇರಿ ಒಟ್ಟು ಆರು ಮಂದಿ ವಿರುದ್ಧ ಕೋಕಾ (KCOCA) ಕಾಯ್ದೆಯ ಸೆಕ್ಷನ್ 3 ಅನ್ನು ಅಳವಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ದಿನಾಂಕ 27-09-2025 ರಂದು ಬೆಳಿಗ್ಗೆ ಫೈಜಲ್ ಖಾನ್ ಎಂಬಾತ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಇರುವ ಸೈಯಿಪುದ್ದಿನ್ ಅವರ ಮನೆಗೆ ಬಂದು, ಬಸ್ ವ್ಯವಹಾರ ಕುರಿತು ಮಾತನಾಡಲು ಮಂಗಳೂರಿಗೆ ಹೋಗಬೇಕಿದೆ ಎಂದು ಹೇಳಿ, ಬೆಳಿಗ್ಗೆ ಸುಮಾರು 10 ಗಂಟೆಗೆ ಕಾರಿನಲ್ಲಿ ಹೊರಟಿದ್ದಾನೆ.
ನಂತರ ಫೈಜಲ್ ಖಾನ್ ಹಾಗೂ ಶರೀಫ್ ಸೇರಿದಂತೆ ಇತರರು ಸೇರಿಕೊಂಡು ಸೈಪುದ್ದೀನ್ ಅವರನ್ನು ಮಲ್ಲೆಗೆ ಕರೆದುಕೊಂಡು ಹೋಗಿ, ಬೆಳಿಗ್ಗೆ 10.15ರಿಂದ 11.30ರ ಮಧ್ಯೆ ಉಡುಪಿ ತಾಲೂಕು ಕೊಡವೂರು ಗ್ರಾಮದ ನಾಗಬನದ ಬಳಿ ಇರುವ (ಎಚ್.ಎ. ಮಂಜಿಲ್) ಮನೆಯಲ್ಲಿ ಮಚ್ಚಿನಿಂದ ತಲೆ ಮತ್ತು ಬೆನ್ನಿಗೆ ಹೊಡೆದು ಕೊಲೆ ನಡೆಸಿದ್ದರು.ಕೊಲೆಯ ಬಳಿಕ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು.ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2025 ಕಲಂ 103 ಹಾಗೂ 3(5) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ನಡೆಸಿದ ಆರೋಪಿಗಳಾದ ಮಹಮ್ಮದ್ ಫೈಸಲ್ ಖಾನ್ (27), ಮುಹಮ್ಮದ್ ಶರೀಫ್ (37) ಮತ್ತು ಅಬ್ದುಲ್ ಶುಕುರ್ (43) ಮತ್ತು ನಾಲ್ಕನೇ ಆರೋಪಿ ರಿಧಾ ಶಭನಾ (27) ಅವರನ್ನು ಬಂಧಿಸಲಾಗಿತ್ತು..
ಅದೇ ರೀತಿ, ಆರೋಪಿಗಳಿಗೆ ಆಯುಧಗಳನ್ನು ಒದಗಿಸಿದ್ದ ಆರೋಪಿ ಮೊಹಮ್ಮದ್ ಸಿಯಾನ್ (31) ನನ್ನು ದಿನಾಂಕ 15-12-2025 ರಂದು ದಸ್ತಗಿರಿ ಮಾಡಲಾಗಿತ್ತು. ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿರುವುದಾಗಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
