ವಿಶ್ವ ಪರಿಸರ ದಿನಾಚರಣೆ : ಲೊಂಬಾರ್ಡ್ ಮಿಷನ್ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ

 


ಉಡುಪಿ: ವಿಶ್ವ ಪರಿಸರ ದಿನಾಚರಣೆ 2026ರ ಅಂಗವಾಗಿ, ಇನ್ಸ್ಪಾಯರ್ (INSPIRE) ಯೋಜನೆಯ ಸಮುದಾಯ ವಿಭಾಗದ  ತಂಡವು ಇಕೋ ಕ್ಲಬ್‌ನ ಸಹಯೋಗದೊಂದಿಗೆ LMH ಆವರಣದಲ್ಲಿ “ಪ್ರಕೃತಿಯಿಂದ ಪ್ರೇರಿತವಾಗಿ, ಹವಾಮಾನಕ್ಕಾಗಿ, ಭವಿಷ್ಯಕ್ಕಾಗಿ” ಎಂಬ ಜಾಗತಿಕ ಧ್ಯೇಯವಾಕ್ಯದಡಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿತು.



ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ, ಆವರಣದ ವಿವಿಧ ಪ್ರದೇಶಗಳಿಂದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು. ಸಂಗ್ರಹಿಸಿದ ತ್ಯಾಜ್ಯ ವಸ್ತುಗಳನ್ನು ಬಳಸಿ ಸೃಜನಾತ್ಮಕವಾದ ಪ್ಲಾಸ್ಟಿಕ್ ಮರದ ಶಿಲ್ಪವನ್ನು ನಿರ್ಮಿಸಲಾಯಿತು. 

ಇಕೋ ಕ್ಲಬ್ ಅಧ್ಯಕ್ಷರು ಈ ಶಿಲ್ಪದ ಮಹತ್ವವನ್ನು ವಿವರಿಸಿ, ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು ಹಾಗೂ ಸುಸ್ಥಿರ ಜೀವನಶೈಲಿಯ ಅಗತ್ಯತೆಯನ್ನು ಪ್ರತಿಬಿಂಬಿಸುವ ಸಂಕೇತವೆಂದು ತಿಳಿಸಿದರು.

ಇದರ ಜೊತೆಗೆ, ಹಸಿರು ಭವಿಷ್ಯದತ್ತ ಆಶೆ, ಬೆಳವಣಿಗೆ, ಪುನರುಜ್ಜೀವನ ಹಾಗೂ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯನ್ನು ಪ್ರತಿನಿಧಿಸುವ ಸಸಿಗಳನ್ನು ನೆಡಲಾಯಿತು.

ಕಾರ್ಯಕ್ರಮಕ್ಕೆ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಶೀಲ್ ಜತ್ತನ್ನ ಅವರ ಗೌರವಾನ್ವಿತ ಉಪಸ್ಥಿತಿಯು ಮತ್ತಷ್ಟು ಪ್ರೇರಣೆ ಮತ್ತು ಉತ್ಸಾಹವನ್ನು ತುಂಬಿ, ವಿಶ್ವ ಪರಿಸರ ದಿನಾಚರಣೆಯನ್ನು ಹೆಚ್ಚು ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಿಸಿತು.

 ವಿಷನ್ ಆಸ್ಪತ್ರೆಯ  ಚಾಪ್ಲಿನ್ ರೆ. ರೈಚಲ್ ಡಿಸಿಲ್ವಾ   ಮಾತನಾಡಿ ದೇವರಿಂದ ಸೃಷ್ಟಿಸಲ್ಪಟ್ಟ ಈ ಪ್ರಕೃತಿಯನ್ನು ಹಾಳು ಮಾಡದೆ    ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದರು. ಈ ಪ್ರಯುಕ್ತ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಥಮ ದ್ವಿತೀಯ  ತೃತೀಯ  ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಛಾಯಾಚಿತ್ರಗಳ ತೀರ್ಪುಗಾರರಾಗಿ ಖ್ಯಾತ  ಛಾಯಾ ಚಿತ್ರಗಾರರಾದ ಜನಾರ್ಧನ್ ಕೊಡವೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲ್ ಸಹಕರಿಸಿದರು.