ಉಳ್ಳಾಲ: ಮಸೀದಿ ಬಳಿ ಬಾಂಬು ಹಾಕುವ ಬೆದರಿಕೆ: ಆರೋಪಿ ಬಂಧನ

ಶಂಕರ್ ಮಸ್ತಪ್ಪ ಮೊಗೆರ್

ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಕಾಮೆಂಟ್ ಮಾಡಿದ್ದ  ಭಟ್ಕಳ ಮೂಲದ ವ್ಯಕ್ತಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.  ಭಟ್ಕಳದ ದೇವಿನಗರ ನಿವಾಸಿ ಶಂಕರ್ ಮಸ್ತಪ್ಪ ಮೊಗೆರ್ (35) ಎಂದು ಗುರುತಿಸಲಾಗಿದೆ. 

ಆರೋಪಿಯು ಇನ್‌ಸ್ಟಾಗ್ರಾಂನಲ್ಲಿ "ಸಪೋರ್ಟ್ ಮಾಡಿ ಬ್ರೋ, ಉಳ್ಳಾಲ ಮಸೀದಿ ಹತ್ತಿರ ಬಾಂಬ್ ಬ್ಲಾಸ್ಟ್ ಮಾಡ್ತೀನಿ" ಎಂದು ಬರೆದುಕೊಂಡು ಧರ್ಮಗಳ ಮಧ್ಯೆ ದ್ವೇಷ ಬಿತ್ತುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  

​ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾರ್ಚ್ 2ರಂದು ಪ್ರಕರಣ ದಾಖಲಾಗಿದ್ದು, ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. 

ಮಂಗಳೂರು ನಗರದ ಉಳ್ಳಾಲ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡವು ಮಂಗಳವಾರ (ಮಾ. 3) ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.