ಉಡುಪಿ: ಶೀರೂರು ವೇದವರ್ಧನ ಶ್ರೀಗಳ ಚೊಚ್ಚಲ ಪರ್ಯಾಯ ಮಹೋತ್ಸವದ ಭವ್ಯ ಶೋಭಾ ಯಾತ್ರೆ ಭಾನುವಾರ ಬೆಳಗಿನ ಜಾವ ವಿಜೃಂಭಣೆಯಿಂದ ನಡೆದಿದ್ದು ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾದರು.
ಕಾಪು ದಂಡತೀರ್ಥದಲ್ಲಿ ಮಧ್ಯರಾತ್ರಿ ಪುಣ್ಯ ಸ್ನಾನ ಮುಗಿಸಿದ ಯತಿಗಳು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ 2:30ಕ್ಕೆ ಸರಿಯಾಗಿ ಜೋಡುಕಟ್ಟೆಗೆ ಆಗಮಿಸಿದರು. ಬಳಿಕ ವೈಭವದ ಮೆರವಣಿಗೆ ಆರಂಭಗೊಂಡು ಕೋರ್ಟ್ ರಸ್ತೆ, ಹಳೆ ಡಯನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಸಾಗಿ ಬಂತು.ಮೆರವಣಿಗೆಯಲ್ಲಿ ಸಾಗಿದ ಜನಪದ ಕಲಾ ಪ್ರಕಾರಗಳು, ಸ್ತಬ್ದಚಿತ್ರಗಳು, ಚೆಂಡೆಯ ನಾದ ಮೆರವಣಿಗೆಯ ಅಂದ ಹೆಚ್ಚಿಸಿದವು. ಚೆಂಡೆ ಬಳಗ, ಕುಣಿತ ಭಜನೆ, ಗೊರವರ ಕುಣಿತ, ಕೊಂಬು ಕಹಳೆ, ಪುಟಾಣಿಗಳಿಂದ ಮರಕಾಲು ಕುಣಿತ, ಕಂಗೀಲು ನೃತ್ಯ, ನಾಸಿಕ್ ಬ್ಯಾಂಡ್, ಗೊಂಬೆ ನೃತ್ಯ ಸಹಿತ ವಿವಿಧ ತಂಡಗಳು ಭಾಗಿಯಾಗಿದ್ದವು. ಹತ್ತಾರು ಟ್ಯಾಬ್ಲೊ, ಕಲಾತಂಡಗಳ ಜೊತೆಯಲ್ಲಿ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೇರಿದಂತೆ ಅಷ್ಟಮಠಗಳ ಯತಿಗಳು ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಸಾಗಿದರು.
ಕೆಲ ವರ್ಷಗಳ ಹಿಂದೆ ಲಿಂಗೈಕ್ಯರಾದ ಶೀರೂರು ಮಠದ ಹಿರಿಯ ಸ್ವಾಮೀಜಿ ಲಕ್ಷ್ಮೀವರ ತೀರ್ಥರ ಮೂರ್ತಿ ತೆರೆದ ವಾಹನದಲ್ಲಿ ಸಾಗಿ ಬಂದಿರುವುದು ವಿಶೇಷವಾಗಿತ್ತು.
ಭಾನುವಾರ ಮುಂಜಾನೆ ಸುಮಾರು 2:30 ಕ್ಕೆ ಜೋಡುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ ಸುಮಾರು ಎರಡು ಕಿ.ಮೀ ಸಾಗಿ ರಥಬೀದಿಯಲ್ಲಿ ಸಂಪನ್ನಗೊಂಡಿತು. ಉಡುಪಿ ಸಹಿತ ನಾಡಿನ ಮೂಲೆಮೂಲೆಯ ಭಕ್ತರು ಪರ್ಯಾಯದ ಅದ್ಧೂರಿತನ ಮತ್ತು ವೈಭವಕ್ಕೆ ಸಾಕ್ಷಿಯಾದರು. ಮುಂಜಾನೆ ಪರ್ಯಾಯದ ಮೆರವಣಿಗೆಗಾಗಿ ರಸ್ತೆಯ ಇಕ್ಕೆಲಗಳಲ್ಲಿ, ಬೃಹತ್ ಕಟ್ಟಡಗಳ ಮಾಳಿಗೆಗಳಲ್ಲಿ ಕಾಂಪೌಂಡ್ ಗೋಡೆಗಳ ಮೇಲೆ ಕುಳಿತುಕೊಂಡು ಜನರು ಮೆರವಣಿಗೆ ವೀಕ್ಷಿಸಿದರು. ಉಡುಪಿಗೆ ಉಡುಪಿಯೇ ಎಚ್ಚರದಿಂದ ಇದ್ದು ವೈಭವದ ಪರ್ಯಾಯ ಮೆರವಣಿಗೆಯ ಸೊಬಗನ್ನು ಕಣ್ತುಂಬಿಕೊಂಡಿತು.
ಮೆರವಣಿಗೆಯಲ್ಲಿ ಉಡುಪಿ ಶಾಸಕ ಯಶ್ವಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ರಘುಪತಿ ಭಟ್, ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ವೀಣಾ ಶೆಟ್ಟಿ ನಯನ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಭಾನುವಾರ ಬೆಳಿಗ್ಗೆ ಪರ್ಯಾಯ ಮಹೋತ್ಸವದ ಅಂತಿಮ ಘಟ್ಟ ಪರ್ಯಾಯ ದರ್ಬಾರ್ ನಡೆಯಲಿದೆ.


