
ಉಡುಪಿ: ಸೆ. 6, 7ರಂದು ದುಬೈನಲ್ಲಿ 'ಅಂತರಾಷ್ಟ್ರೀಯ ಜಾನಪದ ಉತ್ಸವ'- ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕದ ಉದ್ಘಾಟನೆ
ಉಡುಪಿ: "ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕದ ಉದ್ಘಾಟನೆ ಹಾಗೂ ಅಂತರಾಷ್ಟ್ರೀಯ ಜಾನಪದ ಉತ್ಸವ" ಸೆಪ್ಟೆಂಬರ್ 6ಮತ್ತು 7ರಂದು ಯುಎಇ ದುಬೈನ ರಾಮಿಡ್ರಿಮ್ ಪಂಚತಾರಾ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉತ್ಸವದ ನಿರ್ದೇಶಕ, ಕಟಪಾಡಿ ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು ಅವರು, ಕರ್ನಾಟಕದ ಜಾನಪದ ಪ್ರಕಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಈ ಜಾನಪದ ಉತ್ಸವವನ್ನು ಆಯೋಜಿಸಲಾಗಿದೆ. ರಾಜ್ಯದ ಹತ್ತಕ್ಕೂ ಹೆಚ್ಚು ಜಾನಪದ ತಂಡಗಳನ್ನು ದುಬೈಗೆ ಆಮಂತ್ರಿಸಿ, ಜಗತ್ತಿನ ನಾನಾ ರಾಷ್ಟ್ರಗಳ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶನ ನೀಡಿ, ನಾಡಿನ ಸಂಸ್ಕೃತಿಗೆ ಹೊಸ ದಿಕ್ಕು ನೀಡುವ ಹಬ್ಬವೇ ಈ ಜಾನಪದ ಉತ್ಸವ ಎಂದರು.
ಈ ಉತ್ಸವದಲ್ಲಿ ಕರಾವಳಿಯ ಕಂಗಿಲು, ಹುಲಿ ಕುಣಿತ, ಮರಾಠಿ ಹೋಲಿ ನೃತ್ಯ, ಯಕ್ಷಗಾನ ಗೊಂಬೆಯಾಟ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಡೊಳ್ಳು ಕುಣಿತ, ಸೋಲಿಗರ ನೃತ್ಯ, ಕಂಸಾಳೆ ಮೊದಲಾದ ತಂಡಗಳು ಪ್ರದರ್ಶನ ನೀಡಲಿವೆ. ಈ ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಮಾಜಿ ಸಚಿವರಾದ ಹೆಚ್. ಆಂಜನೇಯ, ಡಾ. ಮೋಹನ್ ಆಳ್ವ, ಪ್ರೊ. ರಾಧಾಕೃಷ್ಣ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ - ಹಿ.ಚಿ. ಬೋರಲಿಂಗಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾನಪದ ಪರಿಷತ್ ನ ಯುಎಇ ಘಟಕದ ಅಧ್ಯಕ್ಷ ಸಾದನ್ ದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸರಾದ ಕೊಡಗಿನ ರಾಣಿ ಮಾಚಯ್ಯ ಹಾಗೂ ಮೈಸೂರಿನ ಮಳವಳ್ಳಿ ಮಹದೇವ ಇವರಿಗೆ 'ಎಚ್.ಎಲ್. ನಾಗೇಗೌಡ ಜಾನಪದ ಪ್ರಶಸ್ತಿ' ನೀಡಲಾಗುವುದು. ಹಿರಿಯ ಕಲಾಪೋಷಕ ರಾಮೀ ಹೋಟೆಲ್ ಸಮೂಹದ ಪ್ರವರ್ತಕ ವರದರಾಜ್ ಶೆಟ್ಟಿಯವರಿಗೆ 'ಕನ್ನಡ ಕಲಾಪೋಷಕ' ಬಿರುದು ನೀಡಿ ಸನ್ಮಾನಿಸಲಾಗುವುದು. ಈ ಉತ್ಸವದಲ್ಲಿ ವಿವಿಧ ದೇಶಗಳ 2000ಕ್ಕೂ ಪ್ರತಿನಿಧಿಗಳು ಭಾಗವಹಿಸಲಿದ್ದು, ಜಾನಪದ ಪ್ರದರ್ಶನಗಳ ಜೊತೆಗೆ ವಿವಿಧ ವಿಚಾರಗೋಷ್ಠಿಗಳು, ಕಲಾಕೃತಿಗಳ ಪ್ರದರ್ಶನ, ವಸ್ತು ಪ್ರದರ್ಶನ ಕೂಡಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವದ ಸಂಚಾಲಕ ಪ್ರಶಾಂತ್ ಆಚಾರ್ಯ, ವಾಣಿ ಕೊಡಗು ಇದ್ದರು.