ಉಡುಪಿ: ಇಂದ್ರಾಳಿ ರೈಲು ನಿಲ್ದಾಣದ ಪ್ರವೇಶದ್ವಾರದ ಮೇಲ್ಭಾಗದ ಗೋಪುರದಿಂದ ಜಿಗಿದು ಆತ್ಯಹತ್ಯೆಯ ಯತ್ನದಲ್ಲಿದ್ದ ಯುವಕನನ್ನು ರೈಲ್ವೇ ಆರ್ ಪಿ ಎಫ್ ಪಡೆಯವರು ರಕ್ಷಿಸಿರುವ ಘಟನೆ ನಡೆದಿದೆ. ಯುವಕ ಪಶ್ಚಿಮಬಂಗಾಳ ರಾಜ್ಯದ ದಿನಜಪುರದ ಸುಬರತ್ ಮರ್ಮು (28) ಎಂದು ತಿಳಿದುಬಂದಿದೆ. ವಿಚಾರಣೆಯಲ್ಲಿ ಸಹೋದರಿಯ ಅಗಲಿಕೆಯಿಂದ ಬಹಳವಾಗಿ ನೊಂದಿರುವುದಾಗಿ ಯುವಕ ಹೇಳಿಕೊಂಡಿದ್ದಾನೆ.
ರಕ್ಷಣೆಗೆ ಒಳಗಾದ ಯುವಕ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿರುವುದರಿಂದ, ರೈಲ್ವೆ ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದರು. ಯುವಕನ ವರ್ತನೆಯಲ್ಲಿ ಉಗ್ರತೆ ಕಂಡು ಬಂದಿರುವುದರಿಂದ, ಸಜಿತ್ ಎನ್ನುವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಕಾರ್ಯಾಚರಣೆಯಲ್ಲಿ ಆರ್ ಪಿ ಎಫ್ ಜೀನಾ ಪಿಂಟೋ ಭಾಗಿಯಾಗಿದ್ದರು.ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
