ಬಾರ್ ಒಂದರಲ್ಲಿ ನಡೆದ ಘಟನೆಯ ಮುಂದುವರಿದ ಭಾಗವಾಗಿ ಉಡುಪಿ ಮೀನು ಮಾರುಕಟ್ಟೆ ಬಳಿ ತಲವಾರಿನಿಂದ ಹೊಡೆದಾಡುವ ಮಟ್ಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಇಳಿದಿರುವುದು ಉಡುಪಿಯ ಪ್ರಜ್ಞಾವಂತ ಜನತೆ ಸಹಿಸಲು ಸಾಧ್ಯವಿಲ್ಲ.
ದಿನಂಪ್ರತಿ ಬೀದಿ ಬೀದಿಗಳಲ್ಲಿ ಮುಂಡಾಸು ಕಟ್ಟಿಕೊಂಡು ಬಿಜೆಪಿ ವಿರುದ್ಧ ಭಾಷಣ ಮಾಡುವ ಪ್ರಸಾದ್ ಕಾಂಚನ್, ತನ್ನದೇ ಆಪ್ತನ ಮೇಲೆ ತಲವಾರಿನಿಂದ ಹಲ್ಲೆ ನಡೆದರೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿಲ್ಲ. ತನ್ನ ಆಪ್ತನಿಗೆ ತಮ್ಮದೇ ಪಕ್ಷದ ಕಾರ್ಯಕರ್ತರಿಂದ ರಕ್ಷಣೆ ನೀಡಲು ಪ್ರಸಾದ್ ಕಾಂಚನ್ ಸಾಧ್ಯವಾಗಿಲ್ಲ ಹಾಗೂ ತಮ್ಮದೇ ಪಕ್ಷದ ಸರ್ಕಾರದ ಆಡಳಿತದಲ್ಲಿಯೂ ಕಾರ್ಯಕರ್ತರು ಬೀದಿ ಕಾಳಗ ನಡೆಸುತ್ತಿರುವ ಬಗ್ಗೆ ಯಾವುದೇ ಕಾಂಗ್ರೆಸ್ ಮುಖಂಡರೂ ಬಾಯಿ ಬಿಡುತ್ತಿಲ್ಲ.
ಕಳೆದ ವರ್ಷ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಯೇ ಯುವ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಸಂದರ್ಭದಲ್ಲಿಯೂ ಉಡುಪಿಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಇಂದು ಕಾಂಗ್ರೆಸ್ ಪುಡಿ ರೌಡಿಗಳು ಬೀದಿ ಬೀದಿಯಲ್ಲಿ ತಲವಾರು ಹಿಡಿದು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ಶಾಂತಿ ಕದಡಲು ಮುಂದಾಗಿದ್ದು ಪೊಲೀಸ್ ಇಲಾಖೆ ತಕ್ಷಣ ಈ ಕಿಡಿಗೇಡಿಗಳ ಹೆಡೆಮುರಿ ಕಟ್ಟಿ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
