ತ್ರಾಸಿ:ನಿಂತಿದ್ದ ಲಾರಿಯಲ್ಲಿ ಚಾಲಕನ ಮೃತದೇಹ ಪತ್ತೆ - ಹೃದಯಾಘಾತ ಕಾರಣ ?

ಮೃತ ಚಾಲಕ ಮನ್ಸೂರ್

ಕುಂದಾಪುರ: ಕುಂದಾಪುರ ತಾಲೂಕಿನ ತ್ರಾಸಿ ಫ್ಲೈ ಓವರ್ ಬಳಿ  ಗಂಗೊಳ್ಳಿ ಪೊಲೀಸ್ ಠಾಣೆಯ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿಂತಿದ್ದ  ಲಾರಿಯಲ್ಲಿ ಚಾಲಕನ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಚಲಿಸುತ್ತಿದ್ದ ಲಾರಿ ತ್ರಾಸಿ ಬಳಿ  ಬರುತ್ತಿದ್ದಂತೆ  ಚಾಲಕನಿಗೆ ಹೃದಯಾಘಾತ ಅಥವಾ ಯಾವುದೇ ಅನಾರೋಗ್ಯದಿಂದ ಈ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಮೃತ ವ್ಯಕ್ತಿಯನ್ನು ದಾವಣಗೆರೆ ಮೂಲದ ಚಾಲಕ ಮನ್ಸೂರ್ ಆಲಿ ಎಂದು ಗುರುತಿಸಲಾಗಿದೆ . ತೌಡು ತುಂಬಿದ ಲಾರಿಯಲ್ಲಿ ಇವರು ಮಂದಾರ್ತಿ ಕಡೆಗೆ ಸಾಗುತ್ತಿದ್ದರು.ಇಲ್ಲಿನ ಲಕ್ಷ್ಮಿ ಫೀಡ್ಸ್  ಕಾರ್ಖಾನೆಗೆ ಲೋಡ್ ತಲುಪಿಸಬೇಕಾಗಿತ್ತು . ಆದರೆ ಸಕಾಲದಲ್ಲಿ ಲಾರಿ ತಲುಪದ ಕಾರಣ , ವಿಚಾರಣೆ ನಡೆಸಿದಾಗ ಚಾಲಕ ಮೃತಪಟ್ಟಿರುವುದು ಗೊತ್ತಾಗಿದೆ . ಮನ್ಸೂರ್ ಅಲಿ ಅವರಿಗೆ ಇರಬಹುದಾದ ಅನಾರೋಗ್ಯ ಅಥವಾ ಹೃದಯಘಾತದಿಂದ ಈ ಸಾವು ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.ಬೆಳಗಿನ ವೇಳೆ  ಮೃತಪಟ್ಟರೂ ಲಾರಿ ಚಾಲಕನನ್ನು ಯಾರೂ ಗಮನಿಸದೆ ಸಂಜೆಯ ವೇಳೆಯಲ್ಲಿ ಬೇರೆ ಲಾರಿ ಚಾಲಕರು ಗಮನಿಸಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ಮಾಡಿ ಪ್ರಕರಣ ದಾಖಲಾಗಿದೆ. ಸ್ಥಳೀಯರ ಸಹಕಾರದಿಂದ ಹಾಗೂ ಆಪತ್ಬಾಂಧವ ಇಬ್ರಾಹಿಂ ಗಂಗೊಳ್ಳಿ ಯವರ ಆಂಬುಲೆನ್ಸ್ ನಲ್ಲಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ  ರವಾನಿಸಲಾಗಿದೆ.