ಕಾರ್ಕಳ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ - ಶಿಕ್ಷಕ ವಜಾ !

ವಜಾಗೊಂಡ ಶಿಕ್ಷಕ ಮಕಾಂದಾರ್


ಕಾರ್ಕಳ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪದ ಮೇರೆಗೆ ಶಿಕ್ಷಕನನ್ನು ಕರ್ತವ್ಯದಿಂದ ವಜಾಗೊಳಿಸಿದ ಘಟನೆ ಕಾರ್ಕಳ ತಾಲೂಕು ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

ಮೂಲತಃ ಕಲಬುರಗಿ ನಿವಾಸಿ, ದೈಹಿಕ ಶಿಕ್ಷಣ ಶಿಕ್ಷಕ ಮದರಸ್  ಎಸ್. ಮಕಾಂದಾರ್ ವಜಾಗೊಂಡ ಶಿಕ್ಷಕ. ಈ ಶಿಕ್ಷಕ 2025ರ ಜೂನ್ ತಿಂಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿಗೆ ಅತಿಥಿ ಶಿಕ್ಷಕರಾಗಿ ಇಲ್ಲಿಗೆ ಸೇರ್ಪಡೆಗೊಂಡಿದ್ದರು.

ವಿದ್ಯಾರ್ಥಿಗಳಿಗೆ 200 ಬಸ್ಕಿ ಹೊಡೆಸುವುದು, ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಹ ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಯುವಂತೆ ಸೂಚಿಸುವುದು ಸಹಿತ ಮೊದಲಾದ ಶಿಕ್ಷೆಗಳನ್ನು ನೀಡುತ್ತಿದ್ದರು ಎಂದು ಮಕ್ಕಳು, ಪೋಷಕರು ಆರೋಪಿಸಿದ್ದಾರೆ.

ಮಕ್ಕಳ ದೂರಿನ ಮೇರೆಗೆ ಪೋಷಕರು, ಊರವರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಮಕಾಂದಾರ್‌ಗೆ ಈ ಮೊದಲು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಇದೇ ಪ್ರವೃತ್ತಿ ಮುಂದುವರಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮಕಾಂದರ್‌ನನ್ನು ಪ್ರಾಂಶುಪಾಲರು ಶಾಲಾ ಕರ್ತವ್ಯದಿಂದ ವಜಾಗೊಳಿಸಿದ್ದಾರೆ.