ಪಾರಂಪಳ್ಳಿಯಲ್ಲಿ ಜನರ ವಿರೋಧದ ನಡುವೆ ಘನ ತ್ಯಾಜ್ಯ ಘಟಕ ಉದ್ಘಾಟಿಸಿದ ಸಂಸದ ಕೋಟ- ಸ್ಥಳೀಯರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಸ್ಥಳೀಯರ ಪ್ರತಿಭಟನೆ


ಸಾಲಿಗ್ರಾಮ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿಯಲ್ಲಿ  ಘನ ತ್ಯಾಜ್ಯ ಘಟಕದ ಉದ್ಘಾಟನೆಯನ್ನು ಇಂದು ಸಂಸದ ಕೋಟ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ  ನೆರವೇರಿಸಿದರು.

ಈ ಸಂದರ್ಭ ಘಟಕ ಉದ್ಘಾಟನೆ ವಿರೋಧಿಸಿ ಸ್ಥಳೀಯರು  ಕಪ್ಪು ಪಟ್ಟಿ ಧರಿಸಿ ಘಟಕದ ಸಮೀಪ ಪ್ರತಿಭಟನೆ ನಡೆಸಿದರು.

ಘಟಕದಿಂದ ಸ್ಥಳೀಯರಿಗೆ ಸಮಸ್ಯೆಯಾಗಲಿದ್ದು ಪರಿಸರಕ್ಕೆ ಹಾನಿಯಾಗಲಿದೆ. ಘಟಕಕ್ಕೆ   ಸಿ.ಆರ್.ಝಡ್. ಅನುಮತಿ ಇದುವರೆಗೆ ಸಿಕ್ಕಿಲ್ಲ. ಲೋಕಾಯುಕ್ತದಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ. ಸ್ಥಳೀಯರು  ಹೈಕೋರ್ಟ್ ನಲ್ಲಿ  ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಉದ್ಘಾಟನೆ ನಡೆಸಿರುವುದು ಕಾನೂನುಬಾಹಿರ ಎಂದು ಕಾಂಗ್ರೆಸ್ ಜಿಲ್ಲಾ ಹಿಂದುಳಿದ ಘಟಕದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರಾದ ಮಹೇಶ್ ಪೂಜಾರಿ ಮಾತನಾಡಿ  ಮುಂದೆ ಘಟಕದ ವಿರುದ್ಧ ತೀರ್ಪು ಬಂದು ಕೋಟ್ಯಾಂತರ ರೂ. ನಷ್ಟವಾದರೆ ಅದಕ್ಕೆ ಅಧಿಕಾರಿಗಳು, ಇಂದಿನ ಜನಪ್ರತಿನಿಧಿಗಳು ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.