
ಉಡುಪಿ: ಎ. ಆರ್. ಎಸ್. ಐ. ಶಂಕರ್ ಗೆ ರಾಷ್ಟ್ರಪತಿ ಪದಕದ ಗೌರವ
ಉಡುಪಿ: ಡಿ.ಎ.ಆರ್. ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಆರ್. ಎಸ್. ಐ .ಶಂಕರ್ ಇವರು ರಾಷ್ಟ್ರಪತಿ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ರಾಜ ಭವನದಲ್ಲಿ ನಡೆದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ- 2025 ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಪದಕ ಪ್ರದಾನ ಮಾಡಿದರು. ಕರ್ತವ್ಯದ ಜೊತೆಯಲ್ಲಿ ಕ್ರೀಡಾಭ್ಯಾಸದಲ್ಲಿ ತೊಡಗಿಕೊಂಡು
ಅಂತರಾಷ್ಟ್ರೀಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಇದುವರೆಗೆ 57 ಪದಕ ಪಡೆದಿರುವ ಇವರು ತಮ್ಮ ಕ್ರೀಡಾ ಸಾಧನೆಯ ಮೂಲಕ ಇಲಾಖೆಯ ಘನತೆಯನ್ನು ಹೆಚ್ಚಿಸಿರುತ್ತಾರೆ.
2014ರಲ್ಲಿ ಮಲೇಶಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ 4×100 ,4×400 ಮೀಟರ್ ರಿಲೇ ಓಟದಲ್ಲಿ ಚಿನ್ನ ಹಾಗೂ 100 ,200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿರುತ್ತಾರೆ. ಅಲ್ಲದೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಪದಕಗಳಿಗೆ ಭಾಜನರಾಗಿರುತ್ತಾರೆ.
26 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ ,ವೃತ್ತಿನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಷ್ಟ್ರಪತಿಗಳು 2023 ನೇ ಸಾಲಿನ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಶ್ಲಾಘನೀಯ ಸೇವಾ ಪದಕವನ್ನು ನೀಡಿ ಗೌರವಿಸಿದ್ದರು.