
ಬೆಂಗಳೂರು: ಸುಜಾತಾ ಭಟ್ ಬಿಗ್ ಬಾಸ್ ಗೆ ಹೋಗ್ತಾರಾ? ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ
ಬೆಂಗಳೂರು: ಅನನ್ಯಾ ಭಟ್ ಪ್ರಕರಣವನ್ನು ವರ್ಷಗಳ ಬಳಿಕ ಮುನ್ನೆಲೆಗೆ ತಂದು ವಾರಗಟ್ಟಲೇ ಇಡೀ ನಾಡಿನ ಜನತೆಯನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಸುಜಾತಾ ಭಟ್ಗೆ ದೊಡ್ಡ ಆಫರ್ ಸಿಕ್ಕಿದೆ ಎಂಬ ಗುಲ್ಲು ಎದ್ದಿದೆ. ಮುಂಬರುವ ಸೆಪ್ಟೆಂಬರ್ 28ರಂದು ‘ಬಿಗ್ ಬಾಸ್ ಕನ್ನಡದ 12ʼ ಶೋ ಪ್ರಸಾರ ಆಗಲಿದೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈಗ ಸುಜಾತಾ ಭಟ್ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಆಹ್ವಾನ ಬಂದಿದೆ ಎನ್ನಲಾಗುತ್ತಿದೆ.ಬಿಗ್ ಬಾಸ್ ಕನ್ನಡ’ ಶೋ ತನ್ನ ವಿಶಿಷ್ಟ ಆಟಗಳು, ರೋಚಕ ಟ್ವಿಸ್ಟ್ಗಳು, ವಿವಾದಾತ್ಮಕ ಸೇರಿದಂತೆ ವಿಭಿನ್ನ ವ್ಯಕ್ತಿತ್ವ ಇರುವ ಸ್ಪರ್ಧಿಗಳು, ಕಿಚ್ಚ ಸುದೀಪ್ ನಿರೂಪಣೆಯಿಂದಾಗಿ ಕನ್ನಡದಲ್ಲಿ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಪಡೆದಿದೆ. ಈಗಾಗಲೇ ಭವ್ಯವಾದ ಸೆಟ್ ಹಾಕಲಾಗಿದ್ದು, ಹೊಸ ಥೀಮ್ನಲ್ಲಿ ಈ ಶೋ ಮೂಡಿಬರಲಿದೆ. 17 ಸ್ಪರ್ಧಿಗಳು ಈ ಬಾರಿ ಈ ಶೋನಲ್ಲಿ ಭಾಗವಹಿಸುವ ಸಾಧ್ಯತೆ ಇದೆಯಂತೆ.
ಸುಜಾತಾ ಭಟ್ಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಆಫರ್ ಬಂದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿವೆ. ಆದರೆ ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ಸುಜಾತಾ ಭಟ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಮೆಡಿಕಲ್ ಕಾಲೇಜಿನಲ್ಲಿ ತನ್ನ ಮಗಳು ಅನನ್ಯಾ ಭಟ್ ಓದುತ್ತಿದ್ದಳು, ಅವಳನ್ನು ಅ*ತ್ಯಾಚಾರ ಮಾಡಲಾಗಿದೆ ,ನ್ಯಾಯ ಕೊಡಿ ಎಂದು ಸುಜಾತಾ ಭಟ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಮಾಧ್ಯಮದ ಮುಂದೆ ಅವರು, “ಮಹೇಶ್ ತಿಮರೋಡಿ ಮನೆಯಲ್ಲಿ ನಾನಿದ್ದೆ, ನಮ್ಮ ತಾತನ ಆಸ್ತಿಯನ್ನು ಜೈನರಿಗೆ ಕೊಟ್ಟರು ಎಂಬ ಬೇಸರ ಇತ್ತು. ಹೀಗಾಗಿ ಈ ಸುಳ್ಳು ಹೇಳಿದೆ. ನನಗೆ ಯಾರೂ ದುಡ್ಡು ಕೊಟ್ಟಿಲ್ಲ. ನನಗೆ ಅನನ್ಯಾ ಭಟ್ ಎಂಬ ಮಗಳೇ ಇಲ್ಲ” ಎಂದು ಹೇಳಿದ್ದರು.