
ಉಡುಪಿ: ಕೇರಳ ಸಮಾಜಂ ಉಡುಪಿ ವತಿಯಿಂದ ಓಣಂ ಸಂಭ್ರಮಾಚರಣೆ
ಉಡುಪಿ: ಕೇರಳ ಸಮಾಜಂ ಉಡುಪಿ ಸಂಘಟನೆ ಉಡುಪಿಯಲ್ಲಿ ಕೆಲವೇ ತಿಂಗಳ ಹಿಂದೆ ಆರಂಭಗೊಂಡ ಸಂಘಟನೆಯಾಗಿದೆ. ಉಡುಪಿಯಲ್ಲಿ ನೆಲೆಸಿರುವ ಕೇರಳ ರಾಜ್ಯದ ಮಾಲಯಾಳಿಗರನ್ನು ಒಟ್ಟುಗೂಡಿಸಿ ಎಲ್ಲರನ್ನೂ ಸಂಘಟಿಸಿ ಕೇರಳ ಸಮಾಜಂನ ಒಂದೇ ವೇದಿಕೆಯಡಿಕೆಯಲ್ಲಿ ಒಗ್ಗೂಡಿಸುವುದರ ಮೂಲಕ ಉಡುಪಿಯಲ್ಲಿ ನೆಲೆ ನಿಂತಿರುವ ಕೇರಳಿಗರ ಧ್ವನಿಯಾಬೇಕು ಎನ್ನುವುದು ಸಂಘಟನೆಯ ಮೂಲ ಉದ್ದೇಶ.
ಇತ್ತೀಚೆಗೆ ಉಡುಪಿಯ ಕುಂಜಿಬೆಟ್ಟುವಿನ ಐವೈಸಿ ಸಭಾಭವನದಲ್ಲಿ ಸಂಘಟನೆಯ ಉದ್ಘಾಟನೆಯೂ ಅದ್ಧೂರಿಯಾಗಿ ನಡೆದಿದೆ. ಸಂಘಟನೆಯ ಪ್ರಥಮ ಓಣಂ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಇದೇ ಸೆಪ್ಟೆಂಬರ್ 14 ರ ಭಾನುವಾರದಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಓಣಂ ಸಂಭ್ರಮಾಚರಣೆಯನ್ನು ಆಚರಿಸಲಾಗುವುದು.
ಕಾರ್ಯಕ್ರಮವನ್ನು ಗೋವಾ ರಾಜ್ಯ ರಾಜ್ಯಪಾಲ ಶ್ರೀಧರನ್ ಪಿಳ್ಳೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ,ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹೆ ಸಂಸ್ಥೆಯ ಪ್ರೋಫೆಸರ್ ಡಾ. ಸಾಬೂ ಕೆ.ಎಂ., ಸುವರ್ಣ ,ಕರ್ನಾಟಕ ಕೇರಳ ಸಮಾಜಂ ಅಧ್ಯಕ್ಷ ರಾಜನ್ ಜಾಕೋಬ್, ಖ್ಯಾತ ಸಿನಿಮಾ ತಾರೆಯರಾದ ಹರೀಶ್ ಕನರನ್, ವಿವೇಕ್ ಗೋಪನ್, ಸೀಮಾ ಜಿ ನಾಯರ್ ಭಾಗವಹಿಸಲಿದ್ದಾರೆ.
ಓಣಂ ಸಂಭ್ರಮಾಚರಣೆಯ ಉದ್ಘಾಟನೆ ಬೆಳಿಗ್ಗೆ 10.30ಕ್ಕೆ ಸರಿಯಾಗಿ ನಡೆಯಲಿದೆ. ಇದಕ್ಕೂ ಮೊದಲು ಅಂದರೆ 8.30ಕ್ಕೆ ಸರಿಯಾಗಿ "ಪೂಕಳಂ ಸ್ಪರ್ಧೆ" ನಡೆಯಲಿದೆ. ಆ ಬಳಿಕ ಕೇರಳ ಸಮಾಜಂ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಓಣಂ ಹಬ್ಬದ ಪ್ರಮುಖ ಭಾಗವಾಗಿರುವ 'ಒಣಂ ಸಧ್ಯ' ಅಂದರೆ ಓಣಂ ವಿಶೇಷ ಭೋಜನವನ್ನು ಕೇರಳದ ಕ್ಯಾಲಿಕಟ್ ನ ವಿನೋದ್ ಕುಮಾರ್ ತಂಡದವರಿಂದ ಏರ್ಪಡಿಸಲಾಗಿದೆ. ಭೋಜನದ ಬಳಿಕ ಕೇರಳದ ಸಿನಿಮಾ ಕಲಾವಿದರ ತಂಡದಿಂದ ವೈವಿಧ್ಯಮಯ ಸಂಗೀತ, ನೃತ್ಯ, ಮಿಮಿಕ್ರಿ, ಹಾಸ್ಯಭರಿತ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.ಸಂಜೆ ಜಯಕೇರಳ ಕಳರಿ ಸಂಘಮ್ ತಂಡದಿಂದ ಕಳರಿ ಪ್ರದರ್ಶನ ನಡೆಯಲಿದೆ. ಇಷ್ಟು ಮಾತ್ರವಲ್ಲದೇ ಸೆಪ್ಟೆಂಬರ್ 14 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಗಿರುವುದರಿಂದ ದಿನದ ವಿಶೇಷವಾಗಿ ಹುಲಿ ವೇಷ ತಂಡದಿಂದ ಹುಲಿ ವೇಷ ಕುಣಿತ, ಕೇರಳ ಶೈಲಿಯ ಚಂಡೆ ಮೇಳ, ಓಣಂ ಹಬ್ಬಕ್ಕೆ ಬರುವ ಸಾಂಪ್ರದಾಯಿಕ ಮಾವೇಲಿ ಕಾರ್ಯಕ್ರಮ ವಿಶೇಷ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಕೇರಳ ಸಮಾಜಂನ ಅಧ್ಯಕ್ಷ ಅರುಣ್ ಕುಮಾರ್ ಹೇಳಿದರು.
ಉಪಾಧ್ಯಕ್ಷ ಎಸ್ ವಸಂತ್ ಕುಮಾರ್, ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಖಜಾಂಚಿ ರಮೇಶ್ ಈಪಿ, ಜೊತೆ ಕಾರ್ಯದರ್ಶಿ ಪ್ರದೀಪ್ ಜಿ, ಓಣಂ ಕಮಿಟಿ ಚೇರ್ ಮ್ಯಾನ್ ಪ್ರೊ. ಡಾ ಬಿ ಎಂ.ಜಾರ್ಜ್ ಉಪಸ್ಥಿತರಿದ್ದರು.