ಬ್ರಹ್ಮಾವರ: ತಿಮರೋಡಿ ವಿರುದ್ದ ನಾನ್ ಬೇಲೇಬಲ್ ಪ್ರಕರಣ, ನಮ್ಮ 2 ನೊಟೀಸ್ ಗೂ ಪ್ರತಿಕ್ರಿಯೆ ನೀಡಿಲ್ಲ- ಉಡುಪಿ ಎಸ್ಪಿ ಪ್ರತಿಕ್ರಿಯೆ


 


ಬ್ರಹ್ಮಾವರ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ನಾನ್ ಬೇಲೇಬಲ್ ಪ್ರಕರಣ ದಾಖಲಾಗಿದ್ದು ನಮ್ಮ 2 ನೊಟೀಸ್ ಗೂ ಪ್ರತಿಕ್ರಿಯೆ ನೀಡಿಲ್ಲ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ. ಸದ್ಯ ತಿಮರೋಡಿಯನ್ನು ಉಜಿರೆಯ ಮನೆಯಿಂದ ವಶಕ್ಕೆ ಪಡೆದು ಬ್ರಹ್ಮಾವರ ಪೊಲೀಸರು ಕರೆದುಕೊಂಡು ಬರುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಅವರನ್ನು ನಿಂದಿಸಿ, ಅವಹೇಳನ ಮಾಡಿರುವ ಆರೋಪದಲ್ಲಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ನಿನ್ನೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಫೇಸ್‌ಬುಕ್‌ ಪೇಜ್‌ನಲ್ಲಿ ವಿಡಿಯೊ ಮಾಡಿ ಮಹೇಶ್‌ ಶೆಟ್ಟಿ ತಿಮರೋಡಿ ಸಂತೋಷ್‌ ಅವರನ್ನು ಅವಹೇಳನ ಮಾಡಿ, ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸಿನ ದ್ವೇಷ ಭಾವನೆಯನ್ನು ಉಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.

ಅದರಂತೆ 196(1), 352, 353(2) ಬಿಎನ್‌ಎಸ್‌ ಅಡಿಯಲ್ಲಿ ಮಹೇಶ್‌ ಶೆಟ್ಟಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.ಇಂದು ಇದೇ ಪ್ರಕರಣ ಸಂಬಂಧ ಬ್ರಹ್ಮಾವರ ಪೊಲೀಸರು ಉಜಿರೆಯ ಮನೆಯಿಂದ ವಶಕ್ಕೆ ಪಡೆದು ಬ್ರಹ್ಮಾವರ ಠಾಣೆಗೆ ಕರೆದುಕೊಂಡು ಬರುತ್ತಿದ್ದಾರೆ.