
ಉಡುಪಿ:ಅಷ್ಟಮಿ ಪ್ರಯುಕ್ತ ಶ್ರೀಕೃಷ್ಣನಿಗೆ ಮದ್ಯರಾತ್ರಿ ಅರ್ಘ್ಯ ಪ್ರದಾನ- ಇಂದು ವಿಟ್ಲಪಿಂಡಿ ಸಡಗರ...
ಉಡುಪಿ:ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಪರಾಕಾಷ್ಟೆ ತಲುಪಿದೆ.ನಿನ್ನೆ ಅಷ್ಟಮಿಯಾದರೆ ಇಂದು ವಿಟ್ಲಪಿಂಡಿ ಸಡಗರ. ಸಾವಿರಾರು ಭಕ್ತರು ಹಬ್ಬದ ಹಿನ್ನೆಲೆಯಲ್ಲಿ ಮಠಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ನಿನ್ನೆ ಇಡೀ ದಿನ ಉಪವಾಸದಲ್ಲಿದ್ದ ಭಕ್ತರು ,ತಡರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾಮರ ಸೇವೆ ಮಾಡಿ, ಪುತ್ತಿಗೆ ಕಿರಿಯ ಶ್ರೀಪಾದರು ರಾತ್ರಿ ಪೂಜೆಯನ್ನು ಮಾಡಿದರು. ನಂತರ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಪೂಜೆಯನ್ನು ಪುತ್ತಿಗೆ ಮಠದ ಉಭಯ ಶ್ರೀಪಾದರು ಮಾಡಿ ರಾತ್ರಿ 12.11ರ ರೋಹಿಣಿ ನಕ್ಷತ್ರದ ಸುಮುಹೂರ್ತದಲ್ಲಿ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ನಂತರ ತುಳಸಿ ಕಟ್ಟೆಯಲ್ಲಿ ಚಂದ್ರನಿಗೆ ಉಭಯ ಶ್ರೀಪಾದರು ಅರ್ಘ್ಯ ಪ್ರಧಾನ ಮಾಡಿದರು. ನಂತರ ಪುತ್ತಿಗೆ ಮಠದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ , ವಿಷ್ಣುಮೂರ್ತಿ ಉಪಾಧ್ಯ ಮೊದಲಾದವರು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡಿದರು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡಿದರು.ಅರ್ಘ್ಯ ಪ್ರದಾನ ,ಅಷ್ಟಮಿಯ ಪ್ರಮುಖ ಧಾರ್ಮಿಕ ವಿಧಿಯಾಗಿದೆ.