
ಹೊಸದಿಲ್ಲಿ: ಇಂದಿನಿಂದ 2 ದಿನಗಳ ಕಾಲ ದಿಲ್ಲಿಯಲ್ಲಿ ಜಿಎಸ್ಟಿ ಮಂಡಳಿಯ ಸಭೆ
ದಿನಬಳಕೆ ವಸ್ತುಗಳ ಬೆಲೆ ಇಳಿಕೆಯಾ? ಏರಿಕೆಯಾ?
ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಗೆ ಸಂಬಂಧಿಸಿ ಬುಧವಾರದಿಂದ ಎರಡು ದಿನಗಳ ಕಾಲ ದಿಲ್ಲಿಯಲ್ಲಿ ಜಿಎಸ್ಟಿ ಮಂಡಳಿಯ ಸಭೆ ನಡೆಯಲಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಇದರಲ್ಲಿ ಕರ್ನಾಟಕ ಸಹಿತ ಎಲ್ಲ ರಾಜ್ಯಗಳ ಹ ಣಕಾಸು ಸಚಿವರು ಭಾಗಿಯಾಗಲಿದ್ದಾರೆ. ಇದು ಜಿಎಸ್ಟಿ ಮಂಡಳಿಯ 56ನೇ ಸಭೆಯಾಗಿದೆ. ಸಭೆಯಲ್ಲಿ ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಇಳಿಕೆ, ಜಿಎಸ್ಟಿಯ 4 ಸ್ಲ್ಯಾಬ್ಗಳು 2ಕ್ಕೆ ಇಳಿಕೆ ಮತ್ತು ವಿದ್ಯುಚ್ಛಾಲಿತ ಕಾರುಗಳ ತೆರಿಗೆ ಇಳಿಕೆಯ ಬಗ್ಗೆ ನಿರ್ಧಾರಗಳಾಗುವ ಸಾಧ್ಯತೆ ಇದೆ.
ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಈ ತೆರಿಗೆ ಸುಧಾರ ಣೆಯಿಂದ ರಾಜ್ಯಗಳಿಗೆ ಸುಮಾರು 2 ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ಕರ್ನಾಟಕ ಸಹಿತ 8 ರಾಜ್ಯಗಳು ಆರೋಪಿಸಿದ್ದು, ಈ ನಷ್ಟವನ್ನು 5 ವರ್ಷಗಳ ಅವಧಿಗೆ ಕೇಂದ್ರ ಸರಕಾರ ತುಂಬಿಕೊಡಬೇಕು ಎಂದು ಆಗ್ರಹಿಸಿವೆ. ಅಲ್ಲದೆ ಈ ಬೇಡಿಕೆಗಳನ್ನು ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಮಂಡಿಸುವುದಾಗಿ ತಿಳಿಸಿವೆ.
ಈ ಜಿಎಸ್ಟಿ ಸುಧಾರಣೆಯಿಂದ ರಾಜ್ಯಗಳಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಲಿದೆ ಎಂದು ಕರ್ನಾಟಕ ಸೇರಿ ವಿಪಕ್ಷಗಳ ಆಡಳಿತ ವಿರುವ 8 ರಾಜ್ಯಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಅಲ್ಲದೆ ಈ ನಷ್ಟ ವನ್ನು ಕೇಂದ್ರ ಸರಕಾರ ತುಂಬಿಕೊಡಬೇಕು ಎಂದು ಆಗ್ರಹಿಸಿವೆ. ಕರ್ನಾಟಕ,ಹಿಮಾಚಲ ಪ್ರದೇಶ, ಝಾರ್ಖಂಡ್, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಲ ಸೇರಿ 8 ರಾಜ್ಯಗಳ ಹಣಕಾಸು ಸಚಿವರು ಹಾಗೂ ಪ್ರತಿನಿಧಿಗಳು ಈಗಾಗಲೇ ಸಭೆ ನಡೆಸಿದ್ದು, ತಮ್ಮ ಆಗ್ರಹಗಳನ್ನು ಜಿಎಸ್ಟಿ ಮಂಡಳಿಯ ಎದುರು ಮಂಡಿಸುವ ಸಾಧ್ಯತೆ ಇದೆ.
ಜಿಎಸ್ಟಿ ಸುಧಾರಣೆಯಿಂದ ತೆರಿಗೆ ಇಳಿಕೆಯಾದರೆ ಪ್ರತೀ ರಾಜ್ಯದ ಬೊಕ್ಕಸಕ್ಕೆ ಸರಾಸರಿ ಶೇ. 15-20ರ ವರೆಗೆ ನಷ್ಟ ಉಂಟಾಗಲಿದೆ. ಪ್ರತೀ ರಾಜ್ಯಕ್ಕೂ 1.5 ಲಕ್ಷ ಕೋಟಿ ರೂ.ಗಳಿಂದ 2 ಲಕ್ಷ ಕೋಟಿ ರೂ. ವರೆಗೆ ನಷ್ಟವಾಗಲಿದೆ. ಹಣಕಾಸು ಸ್ಥಿರತೆಗೆ ಧಕ್ಕೆಯುಂಟಾಗಲಿದೆ. ಹಾಗಾಗಿ ರಾಜ್ಯಗಳ ಆರ್ಥಿಕತೆ ಸ್ಥಿರವಾಗುವವರೆಗೆ, 5 ವರ್ಷ ಗಳ ಕಾಲ ಕೇಂದ್ರ ಸರಕಾರ ನಷ್ಟ ಭರಿಸಬೇಕು ಎಂದು ಕರ್ನಾಟಕದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಗ್ರಹಿಸಿದ್ದಾರೆ.