
ಕೊಪ್ಪಳ: ದಲಿತ ಮಹಿಳೆಗೆ ಅವಹೇಳನ - ಯತ್ನಾಳ್ ವಿರುದ್ಧ ಎಫ್ಐಆರ್
17/09/2025 12:39 PM
ಕೊಪ್ಪಳ: ದಲಿತ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಯತ್ನಾಳ್ ಸುದ್ದಿ ವಾಹಿನಿಯೊಂದಕ್ಕೆ ’ನಾಡ ಹಬ್ಬ ದಸರಾ ಉದ್ಘಾಟನೆ ಮಾಡುತ್ತಿರುವವರ ಬಗ್ಗೆ ಹೇಳಿಕೆ ನೀಡುವಾಗ ಸನಾತನ ಧರ್ಮದವರು ಮಾತ್ರ ದಸರಾದಲ್ಲಿ ಚಾಮುಂಡಿ ದೇವಿಗೆ ಹೂ ಮುಡಿಸಬೇಕು ಹೊರತು ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ’ ಎಂದಿದ್ದರು.
‘ದಲಿತ ಮಹಿಳೆಯರಿಗೆ ಹೂ ಮುಡಿಸಲು ಅವಕಾಶವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ದಲಿತ ಸಮುದಾಯಕ್ಕೆ ಅವರು ಅವಮಾನ ಮಾಡಿದ್ದಾರೆ. ಯತ್ನಾಳ್ ನಿತ್ಯ ಪ್ರಚೋದನಕಾರಿ ಹಾಗೂ ಕೋಮು ಸಂಘರ್ಷದ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ದಲಿತ ಸಮುದಾಯುದ ಯುವಮುಖಂಡ ಮಲ್ಲಿಕಾರ್ಜುನ ಪೂಜಾರ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.