
ಬೆಂಗಳೂರು: ಗಬ್ಬರ್ ಸಿಂಗ್ ಟ್ಯಾಕ್ಸ್ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಕೊಂಚ ಕಾಮನ್ ಸೆನ್ಸ್ ಬಂದಂತೆ ತೋರುತ್ತದೆ- ಪ್ರಿಯಾಂಕ್ ಖರ್ಗೆ
ಬೆಂಗಳೂರು: GST ಯನ್ನು ಸರಳೀಕರಿಸಬೇಕೆಂದು ಸುಮಾರು ಒಂದು ದಶಕದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒತ್ತಾಯಿಸುತ್ತಿದೆ. "ಒಂದು ರಾಷ್ಟ್ರ, ಒಂದು ತೆರಿಗೆ" ಎಂಬ ಘೋಷಣೆಯು 0%, 5%, 12%, 18%, 28%, ಮತ್ತು ವಿಶೇಷ ದರಗಳು 0.25%, 1.5%, 3% ಮತ್ತು 6% ತೆರಿಗೆ ದರಗಳೊಂದಿಗೆ "ಒಂದು ರಾಷ್ಟ್ರ, 9 ತೆರಿಗೆಗಳು" ಎಂಬಂತಾಗಿತ್ತು!
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ Rahul Gandhi ಮತ್ತು ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು GST ದರಗಳ ಮೇಲೆ 18% ಮಿತಿ ಅಥವಾ ಇಳಿಕೆಗಾಗಿ ನಿರಂತರವಾಗಿ ಹೋರಾಡುತ್ತಿದ್ದರು. Indian National Congress ತನ್ನ 2019 ಮತ್ತು 2024 ರ ಪ್ರಣಾಳಿಕೆಗಳಲ್ಲಿ ಸರಳೀಕೃತ ಹಾಗೂ ತರ್ಕಬದ್ಧ ತೆರಿಗೆ ಆಡಳಿತದೊಂದಿಗೆ GST 2.0 ರೂಪಿಸಲು ಒತ್ತಾಯಿಸಿತ್ತು. MSME ಗಳು ಮತ್ತು ಸಣ್ಣ ವ್ಯವಹಾರಗಳನ್ನು ತೀವ್ರವಾಗಿ ಬಾಧಿಸಿದ ಸಂಕೀರ್ಣ ನಿಯಮಾವಳಿಗಳನ್ನು ಸರಳೀಕರಿಸಲು ನಾವು ಆಗ್ರಹಿಸಿದ್ದೆವು.
ಮೊದಲ ಬಾರಿಗೆ ರೈತರ ಮೇಲೆ ತೆರಿಗೆ ವಿಧಿಸಿದ್ದು ಬಿಜೆಪಿ ಸರ್ಕಾರ. ಕೃಷಿ ವಲಯದ ಕನಿಷ್ಠ 36 ಸರಕು/ವಸ್ತುಗಳ ಮೇಲಿನ ಜಿಎಸ್ಟಿ ದರಗಳು 12% ರಿಂದ 28% ವರೆಗೆ ಇತ್ತು.
ಪ್ಯಾಕ್ ಮಾಡಿದ ಹಾಲು, ಗೋಧಿ ಹಿಟ್ಟು, ಮೊಸರು, ಪುಸ್ತಕಗಳು, ಲೇಖನ ಸಾಮಗ್ರಿಗಳು ಮುಂತಾದ ಅಗತ್ಯ ಸರಕುಗಳನ್ನು ಜಿಎಸ್ಟಿ ಅಡಿಯಲ್ಲಿ ತರಲಾಯಿತು.
ಒಟ್ಟು ಜಿಎಸ್ಟಿಯ 2/3 ಭಾಗ ಅಂದರೆ 64% ಬಡವರು ಮತ್ತು ಮಧ್ಯಮ ವರ್ಗದವರ ಜೇಬಿನಿಂದ ಬರುತ್ತದೆ. ಆದರೆ ಕೇವಲ 3% ರಷ್ಟು ಜಿಎಸ್ಟಿಯನ್ನು ಕೋಟ್ಯಧಿಪತಿಗಳಿಂದ ಸಂಗ್ರಹಿಸಲಾಗುತ್ತದೆ. ಈ ನಡುವೆ ಕಾರ್ಪೊರೇಟ್ ತೆರಿಗೆ ದರವನ್ನು 30% ರಿಂದ 22% ಕ್ಕೆ ಇಳಿಸಲಾಗಿದೆ.
ಈಗ, ಸರ್ಕಾರವು ಜಿಎಸ್ಟಿಯನ್ನು ತರ್ಕಬದ್ಧಗೊಳಿಸುವ ಮತ್ತು ಸರಳಗೊಳಿಸುವ ನಮ್ಮ ಬೇಡಿಕೆಗಳಿಗೆ ಕೊನೆಗೂ ತಲೆಬಾಗಿದೆ. ಆದರೆ ಕರ್ನಾಟಕದಂತಹ ರಾಜ್ಯಗಳಿಗೆ ಆಗುವ ನಷ್ಟವನ್ನು ಹೇಗೆ ಸರಿದೂಗಿಸುತ್ತೇವೆ ಎಂಬ ಲೆಕ್ಕಾಚಾರವನ್ನು ಅವರು ಇನ್ನೂ ಮಾಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.