
ಉಡುಪಿ: ಕೆಂಪು ಕಲ್ಲು ಮತ್ತು ಮರಳುಗಾರಿಕೆಗೆ ವಿಧಿಸಿದ ನಿರ್ಬಂಧ ತೆರವುಗೊಳಿಸಿ - ಕರವೇ ಸುಜಯ್ ಪೂಜಾರಿ ಒತ್ತಾಯ
ಉಡುಪಿ: ಜಿಲ್ಲೆಯಲ್ಲಿ ಕೆಂಪು ಕಲ್ಲು ತೆಗೆಯಲು ನಿಷೇಧ ಮತ್ತು ಮರಳುಗಾರಿಕೆಗೆ ವಿಧಿಸಿರುವ ನಿರ್ಬಂಧದಿಂದ ಜನರು ಕಟ್ಟಡ ಮತ್ತು ಮನೆ ನಿರ್ಮಿಸಲು ಆಗದೆ ಸಮಸ್ಯೆ ಎದುರಿಸುವಂತಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನ ತಮ್ಮ ಕನಸಿನ ಮನೆ ನಿರ್ಮಾಣ ಮಾಡಲು ಪರದಾಡುವಂತಾಗಿದೆ. ಕಟ್ಟಡ ನಿರ್ಮಾಣದ ಕೆಲಸವನ್ನೇ ನಂಬಿಕೊಂಡ ಕೂಲಿ ಕಾರ್ಮಿಕರ ಜೀವನ ಬೀದಿಗೆ ಬರುವ ಭಯ ತಲೆದೋರಿದೆ. ಕಟ್ಟಡ ನಿರ್ಮಾಣ ಮತ್ತು ಇದಕ್ಕೆ ಸಂಬಂಧಿಸಿದ ಅನೇಕ ಉದ್ಯೋಗಿಗಳು ಸಾವಿರಾರು ಸಂಖ್ಯೆಯಲ್ಲಿದ್ದು, ಅವರು ಒಂದು ಹೊತ್ತಿನ ಊಟವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದು, ನಿರುದ್ಯೋಗ ಸಮಸ್ಯೆ ತಲೆದೋರಲಿದೆ. ಆದುದರಿಂದ ಸಮಾಜದ ಎಲ್ಲಾ ವರ್ಗದ ಜನರ ಹಿತಾಸಕ್ತಿಯನ್ನು ಗಮನಕ್ಕೆ ತೆಗೆದುಕೊಂಡು ಈ ನಿರ್ಬಂಧವನ್ನು ತೆರವುಗೊಳಿಸಿ ಜನರ ಸುಗಮ ಜೀವನಕ್ಕೆ ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಒತ್ತಾಯಿಸಿದೆ.ಈ ಸಮಸ್ಯೆ ಬಗೆಹರಿಯದೇ ಇದ್ದರೆ ಎಲ್ಲಾ ವರ್ಗದ ಕಾರ್ಮಿಕರನ್ನು ಸಂಘಟಿಸಿ, ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗಬಹುದು ಎಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರಿಕೆ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.