
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ - ಡಿಸಿಎಂ ಡಿಕೆ ಶಿವಕುಮಾರ್ !
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.ಮೊಹಂತಿ ಮತ್ತು ತಂಡ ಕ್ಲೀನ್ ಆಗಿ ಕೆಲಸ ಮಾಡುತ್ತಿದೆ. ಬಿಎಲ್ ಸಂತೋಷ್ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ರಾಜಕೀಯವಾಗಿ ನಮಗೂ ಅವರಿಗೂ 100 ವಿರೋಧ ಇರಬಹುದು. ಏನೇ ಹೋರಾಟ ಮಾಡುವುದಿದ್ದರೂ ಸೈದ್ಧಾಂತಿಕವಾಗಿ ಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕವಾಗಿ ತೇಜೋವಧೆ ಮಾಡಬಾರದು ಎಂದರು.
ಈ ಹಿಂದೆ ಆ ವ್ಯಕ್ತಿ ನನ್ನ ವಿರುದ್ಧವೂ ಮಾತನಾಡಿದ್ದ. ಸಿಎಂ ವಿರುದ್ಧವೂ ಮಾತನಾಡಿದ್ದ. ಆರೋಪ ಮಾಡುವುದಾದರೆ ದಾಖಲೆ ಇಟ್ಟು ಮಾತನಾಡಬೇಕು. ಮಾತನಾಡಿದನ ಹತ್ತಿರ ಏನು ದಾಖಲೆ ಇದೆ? ವಿರೋಧಿಗಳ ವಿರುದ್ಧ ಮಾತನಾಡಿದ್ದಾನೆ ಅಂತ ನಾವು ಖುಷಿ ಪಡುವುದಲ್ಲ. ಮುಂದೆ ನಮ್ಮ ವಿರುದ್ಧವೂ ಆತ ಮಾತನಾಡಬಹುದು. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಇವುಗಳಿಗೆಲ್ಲ ನಾವು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.