
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಬಂಧಿಸುವಂತೆ ಸೂಚನೆ ನೀಡಿಲ್ಲ- ಜಿ.ಪರಮೇಶ್ವರ್
ಬೆಂಗಳೂರು: 'ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದವರನ್ನು ಬಂಧಿಸುವಂತೆ ಸೂಚಿಸಿಲ್ಲ. ಇಂತಹ ವಿಷಯಗಳಲ್ಲಿ ಸ್ಥಳೀಯ ಪೊಲೀಸರೇ ಕ್ರಮಕೈಗೊಳ್ಳುತ್ತಾರೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಹಿಂದೂ ಮುಖಂಡ,ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲು ಸೂಚನೆ ನೀಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಅವರು, “ಯಾರೋ, ಏನೋ ಹೇಳುತ್ತಾರೆ ಎಂದ ತಕ್ಷಣ ಬಂಧಿಸಲು ಆಗುತ್ತದೆಯೇ? ಹೇಳಿಕೆಯ ತೀವ್ರತೆ ನೋಡಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿಯೇ ದ್ವೇಷ ಭಾಷಣ ಮಸೂದೆ ಸಿದ್ಧಪಡಿಸಲಾಗಿದೆ' ಎಂದರು.
ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ್ದ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ವ್ಯಕ್ತಿಯ ವಿರುದ್ಧ ಕಾನೂನು ಪ್ರಕಾರ ತಕ್ಷಣ ಕ್ರಮಕೈಗೊಳ್ಳಲಾಗುವುದು' ಎಂದು ಹೇಳಿದ್ದರು.
ವಿರೋಧಪಕ್ಷದ ನಾಯಕ ಆರ್. ಅಶೋಕ ವಿಷಯ ಪ್ರಸ್ತಾಪಿಸಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡುವ ವೇಳೆ ಒಬ್ಬ ವ್ಯಕ್ತಿ, ಮುಖ್ಯಮಂತ್ರಿ 24 ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಅದನ್ನು ಕೇಳಿದ ಬಳಿಕವೂ ಕ್ರಮಕೈಗೊಳ್ಳದಿದ್ದರೆ ಹೇಗೆ? ಸರ್ಕಾರ ಇಷ್ಟೊಂದು ನಿಷ್ಕ್ರಿಯವಾಗಬೇಕೇ ಎಂದು ಪ್ರಶ್ನಿಸಿದ್ದರು.