
ಕುಂದಾಪುರ: ಕುಂದಾಪುರ ಜಾನಪದದ ತವರು - ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ .ಬಾಲಾಜಿ
ಕುಂದಾಪುರ: ಕುಂದಾಪುರ ಜಾನಪದದ ತವರು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಹಾಲಾಡಿಯ ರಾಜೀವ್ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಅಂಗ ಸಂಸ್ಥೆ ಜಾನಪದ ಯುವ ಬ್ರಿಗೇಡ್ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕುಂದಾಪುರದ ಗ್ರಾಮೀಣ ಭಾಗಗಳಲ್ಲಿ ಮೂಲ ಜಾನಪದ ಸಂಸ್ಕೃತಿ ಜೀವಂತವಾಗಿದೆ, ಅಳಿವಿನ ಅಂಚಿನಲ್ಲಿರುವ ಮೂಲ ಜಾನಪದ ಕಲೆಗಳನ್ನು ದಾಖಲೀಕರಣ ಮೂಲಕ ಜಾನಪದ ಯುವ ಬ್ರಿಗೇಡ್ ಉಡುಪಿ ಜಿಲ್ಲಾ ಘಟಕ ಜಾನಪದ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದರು. ಯುವಜನರು ಸ್ಥಳೀಯ ಜಾನಪದ ಕಲೆಯನ್ನು ಅನುಕರಣೆ ಮಾಡಿ ಅದನ್ನೇ ಅಭ್ಯಾಸ ಮಾಡಬೇಕೆಂದು ತಿಳಿಸಿದರು.
ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಮಾತನಾಡಿ ನಶಿಸಿಹೋಗುವ ಜಾನಪದ ಕಲೆಗಳಿಗೆ ಪುನರ್ಜೀವ ಕೊಡುವ ಕಾರ್ಯ ಜಾನಪದ ಯುವ ಬ್ರಿಗೇಡ್ ಮೂಲಕ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಕನ್ನಡ ಜಾನಪದ ಪರಿಸರ ರಾಜ್ಯ ಮಹಿಳಾ ಘಟಕ ಸಂಚಾಲಕಿ ಡಾ. ಭಾರತಿ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಜಾನಪದ ಪರಿಷತ್ ಮೂಲಕ ಯುವಜನರನ್ನು ಜಾನಪದ ಜಾಗೃತಿ ಮೂಡಿಸುವ ಕಾರ್ಯ ರಾಜ್ಯಾದ್ಯಂತ ಪ್ರಾರಂಭವಾಗಿದೆ, ಸ್ಥಳೀಯ ಜನಪದ ಸಂಪ್ರದಾಯ ಕಲೆಗಳ ತರಬೇತಿ ಹಾಗೂ ದಾಖಲೀಕರಣ ಕಾರ್ಯ ಆಗಬೇಕು ಎಂದು ತಿಳಿಸಿದರು.
ಸಾಹಿತಿ ಮಂಜುನಾಥ್ ಕಾಮತ್ ಮಾತನಾಡಿ ಜಾನಪದ ಯುವ ಬ್ರಿಗೇಡ್ ಇಂದಿನ ದಿನಗಳಲ್ಲಿ ಅಗತ್ಯತೆ ಬಹಳಷ್ಟಿದೆ. ಯುವ ಜನರ ಮೂಲಕ ಸಂಸ್ಕೃತಿ ಉಳಿಸುವ ಕನ್ನಡ ಜಾನಪದ ಪರಿಷತ್ ಪ್ರಯತ್ನ ಮೆಚ್ಚುಗೆಗೆ ಪಾತ್ರ ಎಂದರು.
ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾಗಿ ವಿನಯ್, ಸಹ ಸಂಚಾಲಕರಾಗಿ ಶರತ್ ಪೂಜಾರಿ, ಬೈಂದೂರ್ ಸಂಚಾಲಕರಾಗಿ ದರ್ಶನ್ ಪೂಜಾರಿ, ಸ್ವಸ್ಟಿಕ್ ಬಂಡಾರಿ, ಪ್ರಕೃತಿ ಸಾಲಿಗ್ರಾಮ, ಸೌಪರ್ಣಿಕ ಪದವಿ ಸ್ವೀಕರಿಸಿದರು.
ಹಾಲಾಡಿ ಚಂಡೆ ತಂಡ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಜನಪದ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ನೀಡಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಗುರುಪ್ರಸಾದ್ ಶೆಟ್ಟಿ, ಜನಾರ್ಧನ್ ಹಾಲಾಡಿ,ಪುನೀತ್ ಪೂಜಾರಿ, ಕಾಲೇಜಿನ ಉಪನ್ಯಾಸಕರು ಪ್ರಕಾಶ್, ಚಂದ್ರಶೇಖರ, ಗಣಪತಿ ಹೆಗಡೆ, ಕುಮಾರ್ ಕಲಾವಿದ ಗುಂಡು ಪೂಜಾರಿ, ಜಾನಪದ ಯುವ ಬ್ರಿಗೇಡ್ ರಾಜ್ಯ ಸಂಚಾಲಕರು ಅಭಿ ಶೆಟ್ಟಿ, ಕರಾವಳಿ ವಿಭಾಗ ಸಂಚಾಲಕರು ಸಂದೇಶ್ ನಾಯಕ, ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರು ಸಂಪತ್ ಕುಮಾರ್ ಉಪಸ್ಥಿತರಿದ್ದರು.