ಉಡುಪಿ: ಹಿಂದೂ ಸಮಾಜಕ್ಕೆ ನ್ಯಾಯ ಕೇಳುವ ಸಂಘಟನೆ ಆರ್ಎಸ್ಎಸ್. ಈ ಸಂಘಟನೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತು ಸರಿಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದರು.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖರ್ಗೆಯವರ ಹಿರಿತನವನ್ನು ನಾವು ಗೌರವಿಸುತ್ತೇವೆ. ನಿನ್ನೆ ಅವರು ಆಡಿರುವ ಮಾತು ಸರಿಯಲ್ಲ. ಆರ್ಎಸ್ಎಸ್ ಬಗ್ಗೆ ಅತ್ಯಂತ ಕೀಳುಮಟ್ಟದ ಮಾತನಾಡಿದ್ದಾರೆ. ಆರ್ಎಸ್ಎಸ್ ಅನ್ನು ಕೊಲ್ಲಬೇಕು ಎಂದಿದ್ದಾರೆ. ಇಡೀ ಭಾರತದಲ್ಲಿ ಹಿಂದೂಗಳ ಪರ ಧ್ವನಿ ಎತ್ತಬಲ್ಲ ಸಂಘಟನೆ ಆರ್ಎಸ್ಎಸ್. ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದು. ಹಿಂದೂ ಸಮಾಜಕ್ಕೆ ನ್ಯಾಯ ಕೇಳುವ ಸಂಘಟನೆಯಿದು. ರಾಷ್ಟ್ರೀಯತೆಯನ್ನ ಇಟ್ಟುಕೊಂಡ ಸಂಘಟನೆ ಆರ್ಎಸ್ಎಸ್ ಎಂದು ಬಣ್ಣಿಸಿದರು.
ಆರ್ಎಸ್ಎಸ್ ಅನ್ನು ವಿಷದ ಹಾವಿಗೆ ಹೋಲಿಸಿ, ಕೊಲ್ಲಬೇಕು ಎಂದಿದ್ದಾರೆ. ಇದು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಖರ್ಗೆಯಂತಹ ಹಿರಿಯರಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ. ಅವರ ಮಾತಿಗೆ ಪ್ರತಿಕ್ರಿಯೆ ಕೊಡಬಾರದು ಎಂದು ಯೋಚಿಸಿದ್ದೇನೆ ಎಂದರು.
ಉಪಚುನಾವಣೆ ಕುರಿತು ಮಾತನಾಡಿ, ಬಿಜೆಪಿ ಈ ಬಾರಿ ಬಹು ದೊಡ್ಡ ಗೆಲುವು ಸಾಧಿಸಲಿದೆ. ಕೇರಳ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಶಕ್ತಿ ಆಗಲಿದೆ. ಕರ್ನಾಟಕದ ಎರಡು ಕ್ಷೇತ್ರದ ಉಪಚುನಾವಣೆಯಲ್ಲೂ ಗೆಲುವು ಖಚಿತ. ಎರಡು ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ. ಕೇಂದ್ರ ಸರ್ಕಾರದ ಜನಪರ ಕೆಲಸವನ್ನು ಬೆಂಬಲಿಸುತ್ತಾರೆ. ದೇಶದ ಸಮಗ್ರತೆ ಮತ್ತು ಭದ್ರತೆಗೆ ಮತ ಹಾಕುತ್ತಾರೆ. ಮೂರು ವರ್ಷದ ರಾಜ್ಯ ಆಡಳಿತದ ಅನಾಹುತಗಳನ್ನು ಜನ ಗಮನಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
