ಉಡುಪಿ: ಏಪ್ರಿಲ್ 15 - 20 ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ




ಉಡುಪಿಯ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎ. 15ರಿಂದ ಎ. 20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬನ್ನಂಜೆ ಮಾಧವ ಬನ್ನಂಜೆ ತಿಳಿಸಿದರು. 

ದೇವಳದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಎ. 15ರಂದು ಅದ್ದೂರಿಯ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಉಡುಪಿಯ ಜೋಡುಕಟ್ಟೆಯಲ್ಲಿ ಚಾಲನೆ ಸಿಗಲಿದೆ.  ಜಿ. ಶಂಕರ್ ಅವರ ಮುಂದಾಳತ್ವದಲ್ಲಿ 100 ಹೊರೆಕಾಣಿಕೆ ಹಾಗು ಇತರ ಭಕ್ತ ವೃಂದದ ಸಹಕಾರದಿಂದ 250 ಹೊರೆಕಾಣಿಕೆ ದೇಗುಲಕ್ಕೆ ಸಮರ್ಪಣೆಯಾಗಲಿದೆ.  ವಿವಿಧ ಟ್ಯಾಬ್ಲೋ ಸಹಿತ ಹೊರೆಕಾಣಿಗೆ ಮೆರವಣಿಗೆ ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣವಾಗಿ ಕ್ಷೇತ್ರಕ್ಕೆ ಆಗಮಿಸಲಿದೆ ಎಂದರು.

ಎ. 16ರಿಂದ ಎ.20ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಭಕ್ತರಿಗೆ ಅನ್ನ ಪ್ರಸಾದ ನೀಡುವ ಯೋಜನೆ ಇದೆ. ಕಾರ್ಯಕ್ರಮದಲ್ಲಿ 34,000 ಭಕ್ತರು ಭಾಗವಹಿಸಲಿದ್ದು, ಪಾರ್ಕಿಂಗ್ ಗೆ ಅಡಚನೆಯಾಗದಂತೆ ಸ್ಥಳಗಳನ್ನು ಗುರುತಿಸಲಾಗಿದೆ. ಸರಸ್ವತಿ ಶಾಲೆ,  ಸುಗುಣ ಹೋಟೆಲ್ ಪಕ್ಕದಲ್ಲಿ, ಜಯಲಕ್ಷ್ಮಿ ಮಳಿಗೆ, ಬನ್ನಂಜೆ ಬಿಲ್ಲವರ ಸೇವಾ ಸಂಘದ ಆವರಣ ಸೇರಿದಂತೆ ಕೆಲ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ವ್ಯಾಪಾರಿ ಮಳಿಗೆಗಳನ್ನು ಕೂಡ ನಿರ್ಮಿಸಿದ್ದು, ಎ. 15ರಂದು ಶುಭಾರಂಭಗೊಳ್ಳಲಿದೆ ಎಂದರು. 


ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪಾರ್ಕಿಂಗ್ ಗೆ ಸರಿಯಾದ ಸ್ಥಳಾವಕಾಶದ ಕೊರತೆ ಇದ್ದು, ಪಾರ್ಕಿಂಗ್ ನಿಯಂತ್ರಣಕ್ಕಾಗಿ 36 ಸೆಂಟ್ಸ್ ಜಾಗವನ್ನು ಪಡೆದುಕೊಳ್ಳಲು ಈಗಾಗಲೇ 50 ಮುಂಗಡವಾಗಿ ನೀಡಲಾಗಿದ್ದು, ಇನ್ನೂ ಕೂಡಾ 1.05 ಕೋಟಿ ರೂಪಾಯಿ ಹಣದ ಅವಶ್ಯಕತೆ ಇದೆ. ಹಾಗಾಗಿ ಇಷ್ಟು ಮೊತ್ತದ ಹಣವನ್ನು ನೀಡಿ ಜಾಗವನ್ನು ದೇವರ ಸಮರ್ಪಣೆ ಮಾಡುವ ಇಚ್ಛೆ ಇದೆ. ಇದಕ್ಕಾಗಿ ಭಕ್ತರ ಸಹಕಾರದ ಅವಶ್ಯಕತೆಯಿದ್ದು, ದೇವಳದ ಕೂಪನ್ ವ್ಯವಸ್ಥೆ ಮಾಡಲಾಗಿದೆ. 1 ಸಾವಿರದಿಂದ 5 ಸಾವಿರದ ಕೂಪನ್ ವ್ಯವಸ್ಥೆ ಇದೆ ಎಂದರು. ಇನ್ನು 100 ರೂಪಾಯಿ ಪಡೆದು ಕಾಣಿಕೆ ಡಬ್ಬಿ ನೀಡುವ ವ್ಯವಸ್ಥೆಯನ್ನುಕೂಡಾ ಮಾಡಿದ್ದೇವೆ. ಒಂದು ವರ್ಷದ ಅವಧಿಯಲ್ಲಿ ಡಬ್ಬಿ ತುಂಬಿಸಿ ದೇವರಿಗೆ ಅರ್ಪಣೆ ಮಾಡಬೇಕೆನ್ನುವ ಇಚ್ಛೆ ಇದೆ. ಭಕ್ತರ ಸಹಕಾರದಿಂದ ಪಡೆದು ದೇವರಿಗೆ ಅರ್ಪಣೆ ಮಾಡಬೇಕು ಎಂದರು. 

ಸುದ್ದಿಗೋಷ್ಟಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯಾ, ಪ್ರಧಾನ ತಂತ್ರಿಗಳಾದ ಶಶಿಕಾಂತ್ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪುತ್ರನ್, ಎಂ. ಪ್ರಭಾಕರ್ ಶೆಟ್ಟಿ, ಶೇಖರ್ ಶೆಟ್ಟಿ, ಸುದೇಶ್ ಶೇಟ್, ರಾಜೇಶ್ ಬಿ., ವಿದ್ಯಾಲತಾ ಯು. ಶೆಟ್ಟಿ, ಶಮಿತಾ ಎಸ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.