![]() |
| ಸುದ್ಧಿಗೋಷ್ಠಿ |
ಉಡುಪಿ: ತುಳುಕೂಟ ಉಡುಪಿ (ರಿ)24ನೇ ವರ್ಷದ ಕಸ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆಯು ಇದೇ ಜನವರಿ 5ರಿಂದ 11 ರತನಕ ಉಡುಪಿ ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ ವಿವಿಧ 7 ಪ್ರಸಿದ್ದ ತಂಡಗಳಿಗೆ ಅವಕಾಶ ನೀಡಲಾಗಿದೆ. ಜನವರಿ 5, 2026 ರಂದು ಸಂಜೆ 5 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಅಧ್ಯಕ್ಷತೆಯಲ್ಲಿ, ಕೆ.ಎಂ.ಶೆಟ್ಟಿ ಚೇರ್ಮೆನ್ ವಿ.ಕೆ. ಗ್ರೂಪ್ ಆಫ್ ಕಂಪನೀಸ್ ಅವರು ಕಲ್ಲೂರು ತುಳು ನಾಟಕ ಪರ್ಬ ಉದ್ಘಾಟಿಸಲಿರುವರು. ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಕರ್ನಾಟಕ ಸರಕಾರ ಹಾಗೂ ಪ್ರೊ. ವನಿತಾ ಮಯ್ಯ, ಪ್ರಾಂಶುಪಾಲರು ಎಂ.ಜಿ.ಎಂ. ಕಾಲೇಜು ಉಡುಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಜನವರಿ 5 ರಂದು ಕಲಾಮಂದಿರ ಉಡುಪಿ ಇವರಿಂದ ಪಿಲಿ ನಾಟಕ, ಜನವರಿ.6 ರಂದು ರಂಗ ಮಿಲನ, ಮುಂಬಯಿ ಇವರಿಂದ ನಾಗ ಸಂಪಿಗೆ ನಾಟಕ, ಜನವರಿ.7 ರಂದು ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಡ ಇವರಿಂದ ಕಾಶಿತೀರ್ಥ ನಾಟಕ, ಜನವರಿ 8 ರಂದು ಕರಾವಳಿ ಕಲಾವಿದರು (ರಿ.) ಮಲ್ಪೆ, ಉಡುಪಿ ಇವರಿಂದ ಮುಗಿಯಂದಿ ಕಥೆ ನಾಟಕ, ಜನವರಿ.9ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಟ ಇವರಿಂದ ನೆಲ ನೀರ್ದ ದುನಿಪು ನಾಟಕ, ಜನವರಿ.10 ರಂದು ಸುಮನಸಾ (ರಿ.) ಕೊಡವೂರು, ಉಡುಪಿ ಇವರಿಂದ ಯೇಸ ನಾಟಕ, ಜನವರಿ 11ರಂದು ಸಂಗಮ ಕಲಾವಿದೆರ್ ಮಣಿಪಾಲ (ರಿ.) ಇವರಿಂದ ಮಾಯೊಕದ ಮಣ್ಣಕರ ನಾಟಕ ಪ್ರದರ್ಶನಗೊಳ್ಳಲಿವೆ.
ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ರೂ.20,000.00, ರೂ. 15,000.00. ರೂ. 10,000.00 ನಗದು ಬಹುಮಾನ. ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರೂ. 1,000.00 ಮತ್ತು ದ್ವಿತೀಯ, ತೃತೀಯ ಬಹುಮಾನ ಕೊಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ. 5,000.00 ಹಾಗೂ ಹೊರರಾಜ್ಯದ ತಂಡಗಳಿಗೆ ರೂ. 10,000.00 ಭತ್ಯೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಉಡುಪಿ ತುಳುಕೂಟದ ಪ್ರತಿಷ್ಠಿತ ಹಾಗೂ ಯಶಸ್ವಿ ಕಾರ್ಯಕ್ರಮವಾದ ಕನ್ನೂರು ತುಳು ನಾಟಕ ಪರ್ಬವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಅಖಿಲ ಭಾರತ ತುಳುಕೂಟ (ರಿ.) ಕುಡ್ಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇವರ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಉಪಾಧ್ಯಕ್ಷ ರಾದ ಭುವನ ಪ್ರಸಾದ್ ಹೆಗ್ಡೆ,ವಿ.ಕೆ.ಯಾದವ್, ಕಾರ್ಯದರ್ಶಿ ಗಂಗಾಧರ ಕಿದಿಯೂರು,ಕೆಮ್ತೂರು ತುಳು ನಾಟಕ ಪರ್ಬದ ಸಂಚಾಲಕರಾದ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು.
