
ಉಡುಪಿ: ಗೊಂದಲದ ಗೂಡಾದ ರಾಜ್ಯ ಸರ್ಕಾರದ ಸಮೀಕ್ಷೆ- ಶ್ರೀನಿಧಿ ಹೆಗ್ಡೆ
ಉಡುಪಿ: ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಗಣತಿಯು ಜನತೆಗೆ ಹಾಗೂ ಗಣತಿ ಮಾಡುತ್ತಿರುವ ಸಿಬ್ಬಂದಿಗಳಿಗೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಅರ್ಥವಿಲ್ಲದ, ಗೊಂದಲಮಯವಾಗಿರುವ ಹಾಗೂ ಸಂಬಂಧವೇ ಇಲ್ಲದ ಹಲವು ಪ್ರಶ್ನೆಗಳನ್ನು ಇದರಲ್ಲಿ ತುರುಕಿಸಿರುವುದು ಎಲ್ಲ ಗೊಂದಲಗಳಿಗೂ ಕಾರಣವಾಗಿದೆ ಎಂದು ಬಿಜೆಪಿ ಉಡುಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಹೇಳಿದ್ದಾರೆ.
ಸ್ವತಃ ರಾಜ್ಯದ ಉಪ ಮುಖ್ಯಮಂತ್ರಿಯವರೇ ತಮ್ಮ ಮನೆಗೆ ಸಮೀಕ್ಷೆಗೆ ಬಂದವರನ್ನು ಇಷ್ಟೊoದು ಪ್ರಶ್ನೆ ಯಾಕಾಗಿ ಕೇಳುತ್ತೀರಿ, ಇಷ್ಟೊಂದು ಗೊಂದಲ ಯಾಕೇ..? ತೀರಾ ವೈಯಕ್ತಿಕ ಪ್ರಶ್ನೆ ಇದರಲ್ಲಿ ಯಾಕೆ ಸೇರಿಸಿದ್ದೀರಿ ಎಂದು ಕೇಳಿರುವುದು ರಾಜ್ಯಕ್ಕೆ ತಿಳಿದಿರುವ ಸಂಗತಿ. ಸ್ವತಃ ಉಪ ಮುಖ್ಯಮಂತ್ರಿಗಳಿಗೇ ಉತ್ತರಿಸಲು ಗೊಂದಲವಾದ ಪ್ರಶ್ನೆಗಳು ಜನಸಾಮಾನ್ಯರಿಗೆ ಕಿರಿಕಿರಿ ಆಗದೇ ಇರದೇ ಎಂದು ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ.
ಮತಾಂತರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಕೊಡುವ ಪ್ರಯತ್ನದ ಭಾಗವಾಗಿ ಹಿಂದುಳಿದ ವರ್ಗಗಳ ಆಯೋಗವು ಕ್ರೈಸ್ತ ಎಸ್ಸಿ ಜಾತಿಗಳನ್ನು ಜಾತಿ ಗಣತಿ ಪಟ್ಟಿಯಲ್ಲಿ ಸೇರಿಸಿದ್ದು ಬಳಿಕ ಸಮಾಜಗಳ ಮಠಾಧೀಶರು, ಪ್ರಮುಖರು ಹಾಗೂ ಬಿಜೆಪಿ ನಾಯಕರು ಧ್ವನಿ ಎತ್ತಿದ ಪರಿಣಾಮ ಆಯೋಗವು ಕ್ರೈಸ್ತ ಎಸ್ಸಿ ಜಾತಿಯ ಹೆಸರನ್ನು ಹಿಂಪಡೆದಿರುವುದು ತಿಳಿದಿರುವ ಸಂಗತಿ. ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಸಮೀಕ್ಷೆಗೆ ರಾಜ್ಯದ ವಿಶೇಷ ಚೇತನ ನೌಕರರನ್ನೂ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಮಾನವೀಯ ಸ್ಪಂದನೆಯಿಲ್ಲದ ಸರ್ಕಾರದ ಧೋರಣೆಯನ್ನು ಇದು ಪ್ರತಿಬಿಂಬಿಸಿದೆ. ಇವೆಲ್ಲವನ್ನೂ
ಗಮನಿಸುವಾಗ ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿರುವ ಅಕ್ಟೋಬರ್ ಹಾಗೂ ನವೆಂಬರ್ ಕ್ರಾಂತಿ ಹಾಗೂ ಈ ಜನಗಣತಿಗೆ ಒಂದಕ್ಕೊಂದು ಸಂಬಂಧ ಇರುವಂತೆ ತೋಚುತ್ತಿದೆ. ರಾಜ್ಯ ಸರ್ಕಾರ ಅದಷ್ಟು ಬೇಗನೆ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.