
ಧರ್ಮಸ್ಥಳದಲ್ಲಿ ಹಲ್ಲೆ -ಗಲಾಟೆ ವಿಚಾರ -ತನಿಖೆ ಮಾಡಿ ವರದಿ ಕೊಡಲು ಸೂಚಿಸಿದ ಜಿ. ಪರಮೇಶ್ವರ್
ಬೆಂಗಳೂರು : ಬುಧವಾರ ಧರ್ಮಸ್ಥಳದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಕುರಿತು ತನಿಖೆ ನಡೆಸಿ ವರದಿ ಕೊಡಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ನಿನ್ನೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ. ಅದು ಯಾಕಾಗಿದೆ ಯಾರು ಕಾರಣಕರ್ತರು ಅವರ ಉದ್ದೇಶ ಏನಿದೆ ಅನ್ನೋದನ್ನು ತನಿಖೆ ಮಾಡಿ ವರದಿ ಕೊಡಲು ಹೇಳಿದ್ದೇನೆ. ಇದು ಒಂದು ರೀತಿಯಲ್ಲಿ ಸಂಘರ್ಷ ಆಗ್ತಾ ಇದೆ ಅಂತ ಕಾಣಿಸ್ತಾ ಇದೆಮ ಯಾಕೆ ಆಗ್ತಾ ಇದೆ ಗೊತ್ತಿಲ್ಲ. ಅಲ್ಲಿನ ಜನ ಸಮುದಾಯ ಎಸ್ಐಟಿ ಮಾಡಬೇಕು ಅಂತ ಒತ್ತಾಯ ಮಾಡಿದರು. ನಾವು ಅದನ್ನು ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್ಐಟಿ ಮಾಡಿದ್ದೇವೆ.
ಅದೆಲ್ಲವನ್ನೂ ತನಿಖೆ ಮಾಡಬೇಕು ಅಂತ ನ್ಯಾಯಾಲಯದ ಸೂಚನೆಯಿತ್ತು. ನಾವು ಕೂಡ ಸಾರ್ವಜನಿಕವಾಗಿ ಗಂಭೀರವಾಗಿ ಇದನ್ನು ತೆಗೆದುಕೊಂಡು ಎಸ್ಐಟಿ ಮಾಡಿದ್ದೇವೆ. 13 ಸ್ಥಳಗಳಲ್ಲಿ ಹೆಣಗಳನ್ನು ಹೂತಿದ್ದಾಗಿ ಹೇಳಿದ್ದ.ಅದರ ಪ್ರಕಾರ ಎಸ್ಐಟಿ 13 ಸ್ಥಳಗಳನ್ನು ಗುರುತಿಸಿದೆ. ಆರನೇ ಸ್ಥಳದಲ್ಲಿ ಒಂದು ಗಂಡಸಿನ ಅಸ್ಥಿ ಪಂಜರ ಸಿಕ್ಕಿದೆ. ಅದನ್ನು ನೀವೆಲ್ಲ ರಿಪೋರ್ಟ್ ಕೂಡ ಮಾಡಿದ್ದೀರಾ. 13ನೇ ಸ್ಥಳಕ್ಕೆ ಹೋದಾಗಲೂ ಏನೂ ಸಿಕ್ಕಿಲ್ಲ.ಅದನ್ನು ಹೊರತುಪಡಿಸಿ ಗುಡ್ಡದಲ್ಲಿ ಮೂಳೆಗಳು ಸಿಕ್ಕಿರೋದನ್ನು ಸೀಲ್ ಮಾಡಿದ್ದಾರೆ. ಅವುಗಳನ್ನು ಎಫ್ಎಸ್ಎಲ್ ಗೆ ಕಳಿಸಿ ಕೊಡುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳಾಗಿ ಘರ್ಷಣೆಗಳು ನಡೆದಿವೆ. ಕೇಸ್, ಕೌಂಟರ್ ಕೇಸ್ ಕೊಟ್ಟಿದ್ದಾರೆ. ಎಲ್ಲವನ್ನೂ ರಿಜಿಸ್ಟರ್ ಮಾಡಿ ಅಂತ ಹೇಳಿದ್ದೇವೆ. ಅದನ್ನು ರಿಜಿಸ್ಟರ್ ಮಾಡಿದ್ದಾರೆ. ಅದರ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅನ್ನೋದನ್ನು ಎಸ್ಐಟಿ ಮತ್ತು ಸ್ಥಳೀಯ ಪೊಲೀಸರು ಮಾಡುತ್ತಾರೆ ಎಂದು ತಿಳಿಸಿದರು.