
ಬೆಳ್ತಂಗಡಿ: ವಸಂತ್ ಗಿಳಿಯಾರ್ ಸಹಿತ 17 ಮಂದಿ ತನಗೆ ಬೆದರಿಕೆ ಹಾಕುತ್ತಿದ್ದಾರೆ- ಜಯಂತ್ ಟಿ. ದೂರು
12/08/2025 03:33 AM
ಬೆಳ್ತಂಗಡಿ: ತನ್ನನ್ನು ಕೆಲವರು ಹಿಂಬಾಲಿಸಿಕೊಂಡು ಬಂದು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು 17 ಮಂದಿಯ ವಿರುದ್ಧ ಎರಡನೇ ದೂರುದಾರ ಜಯಂತ್ ಟಿ. ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಯುವತಿಯ ಮೃತದೇಹವನ್ನು ಹೂತು ಹಾಕಿರುವುದನ್ನು ನೋಡಿದ್ದೇನೆ ಎಂದು ಎಸ್ಐಟಿ ಗೆ ಜಯಂತ್ ಈ ಹಿಂದೆ ಮಾಹಿತಿ ನೀಡಿದ್ದರು.
ಎಸ್ಐಟಿಗೆ ದೂರು ನೀಡಿದ ದಿನದಿಂದ ತನ್ನ ಮೇಲೆ ಹಲ್ಲೆ ಮಾಡಲು ಮಾಧ್ಯಮಗಳ ಮೂಲಕ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಸಂತ್ ಗಿಳಿಯಾರು, ಕಿರಿಕ್ ಕೀರ್ತಿ, ವಿಕಾಸ್ ಶಾಸ್ತ್ರಿ ಮತ್ತು ಪರ್ವ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಎಂಬವರನ್ನು ದೂರಿನಲ್ಲಿ ಉಲ್ಲೇಖಿಸಿರುವ ಜಯಂತ್ ಟಿ. ಅವರು, ತಂಡವೊಂದು ತನ್ನನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಬಗ್ಗೆ ಪರಿಶೀಲಿಸಲಾಗುತ್ತಿದ್ದು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ.