
ವಯನಾಡ್ ಮಾದರಿಯ ಜಲಸ್ಪೋಟ - ಉತ್ತರಕಾಶಿಯಲ್ಲಿ ಮೃತರ ಸಂಖ್ಯೆ 100 ಕ್ಕೂ ಹೆಚ್ಚು ?
ಉತ್ತರಕಾಶಿ:ಉತ್ತರಾಖಂಡದ ಉತ್ತರಕಾಶಿಯಲ್ಲಿ ಮಂಗಳವಾರ ದಿಢೀರ್ ಪ್ರವಾಹ ಕಂಡು ಬಂದಿದ್ದು, ಐವರು ಮೃತಪಟ್ಟು, ಇತರ 50 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.ಕಳೆದ ವರ್ಷ ಕೇರಳದ ವಯನಾಡ್ ನಲ್ಲಿ ಸಂಭವಿಸಿದ ದುರಂತವನ್ನು ನೆನಪಿಸುವ ರೀತಿಯಲ್ಲೇ ಈ ದುರಂತ ಸಂಭವಿಸಿದೆ.
ಧಾರಾಲಿ ಖೀರಗರ್ದ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಹರಿಯುತ್ತಿದ್ದ ಪರಿಣಾಮ, ಹಲವಾರು ಮನೆಗಳು ಕೊಚ್ಚಿ ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಧಾರಾಲಿಯು ಈ ಮಾರ್ಗದಲ್ಲಿನ ಪ್ರಮುಖ ತಂಗುದಾಣವಾಗಿದ್ದು, ಇಲ್ಲಿ ಹೋಟೆಲ್ಗಳು, ರೆಸ್ಟೋರೆಂಟ್ ಹಾಗೂ ಹೋಂಸ್ಟೇಗಳು ಇವೆ. ಪ್ರಸಿದ್ಧ ಯಾತ್ರಾಸ್ಥಳ ಗಂಗೋತ್ರಿಯು ಧಾರಾಲಿಯಿಂದ 18 ಕಿ.ಮೀ. ದೂರದಲ್ಲಿದೆ.
ಖೀರಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ ದಿಢೀರ್ ಪ್ರವಾಹ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಪ್ರವಾಹದಿಂದಾಗಿ ನೀರು ಗ್ರಾಮಕ್ಕೆ ನುಗ್ಗುತ್ತಿರುವುದು ಹಾಗೂ ಮನೆಗಳಿಗೆಹಾನಿಯಾಗುತ್ತಿರುವುದನ್ನು ತೋರಿಸುವ ವಿಡಿಯೊಗಳು ವ್ಯಾಪಕವಾಗಿ ಹಂಚಿಕೆಯಾಗಿವೆ. ಅವಶೇಷಗಳಡಿ ಸಿಲುಕಿರುವ ವ್ಯಕ್ತಿಯೊಬ್ಬರು ಹೊರಗೆ ಬರಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಹರ್ಸಿಲ್ನಿಂದ ಸೇನೆಯ ತುಕಡಿಯೊಂದು ಘಟನಾ ಸ್ಥಳಕ್ಕೆ ತೆರಳಿ, ಪರಿಹಾರ ಕಾರ್ಯ ಕೈಗೊಂಡಿದೆ’ ಎಂದು ಉತ್ತರಕಾಶಿ ಜಿಲ್ಲಾಧಿಕಾರಿ ಪ್ರಶಾಂತ ಆರ್ಯ ತಿಳಿಸಿದ್ದಾರೆ.‘ಪ್ರವಾಹದಿಂದ ತೊಂದರೆಗೆ ಒಳಗಾದವರ ಸುರಕ್ಷತೆಗೆ ನಾನು ಪ್ರಾರ್ಥಿಸುವೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತನಾಡಿ, ಪರಿಸ್ಥಿತಿ ಕುರಿತು ಮಾಹಿತಿ ಪಡೆದಿರುವೆ. ಸಂತ್ರಸ್ತರಿಗೆ ಎಲ್ಲ ನೆರವು ನೀಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.