ತೊಟ್ಟಂ: ಅಲೆಯ ರಭಸಕ್ಕೆ ಮಗುಚಿಬಿದ್ದ ದೋಣಿ: ನಾಲ್ವರು ಮೀನುಗಾರರ ರಕ್ಷಣೆ

 


ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ತೀರದ ತೊಟ್ಟಂ ಬಳಿ ಸಮುದ್ರದ ರಭಸಕ್ಕೆ ದೋಣಿ ಮಗಚಿ ಬಿದ್ದಿದ್ದು, ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯ ಯೋಗೇಶ್‌ ಅವರು ಘಟನೆ ನಡೆದ ತಕ್ಷಣ ಈಶ್ವರ್‌ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿ ಸ್ಥಳಿಯರಾದ ಪ್ರವೀಣ್‌, ಉದಯ್‌ ಯವರ ಜೊತೆ ಸೇರಿ ಲೈಫ್‌ ಜಾಕೇಟ್‌ ನೀಡಿ ನಾಲ್ವರು ಮೀನುಗಾರರ ಜೀವ ಉಳಿಸಲಾಗಿದೆ ಎಂದು ಮುಳುಗು ತಜ್ಞ ಈಶ್ವರ್‌ ಮಲ್ಪೆ ತಿಳಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮಲ್ಪೆಯ ಕಡಲು ಉಕ್ಕೇರಿ ಪ್ರಕ್ಷುಬ್ಧಗೊಳ್ಳುತ್ತಿದೆ. ಈಜು ಬರುತ್ತದೆ ಎಂದು ಹೇಳಿ ಯಾರೂ ಸಹ ನೀರಿಗೆ ಇಳಿಯಬೇಡಿ. ಯಾವ ಕ್ಷಣದಲ್ಲಿ ಅಲೆಗಳು ಮೇಲುಕ್ಕಿ ಬರುತ್ತವೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಎಲ್ಲಾ ಮೀನುಗಾರರು ಲೈಫ್‌ ಜಾಕೇಟ್‌ ಹಾಕಿಯೇ ಮೀನುಗಾರಿಕೆಗೆ ತೆರಳಬೇಕು ಎಂದು ಆಪದ್ಭಾಂಧವ ಈಶ್ವರ್‌ ಮಲ್ಪೆ ಹೇಳಿದ್ದಾರೆ.