
ಮಂಗಳೂರು: ಈಜುಕೊಳದಲ್ಲೇ ಹೃದಯಾಘಾತವಾಗಿ ಖ್ಯಾತ ಈಜುಪಟು ಮೃತ್ಯು
ಮಂಗಳೂರು: ನಗರದ ಲೇಡಿಹಿಲ್ನಲ್ಲಿರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಈಜು ತರಬೇತುದಾರ ಮತ್ತು ಜೀವರಕ್ಷರಾಗಿದ್ದ ರಾಷ್ಟ್ರೀಯ ಈಜುಪಟು ಕೆ. ಚಂದ್ರಶೇಖರ್ ರೈ ಸೂರಿಕುಮೇರು (52) ಅವರು ಈಜುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರವಿವಾರ ನಿರ್ವಹಣೆಯ ಕೆಲಸಗಳ ಕಾರಣದಿಂದ ಈಜುಕೊಳಕ್ಕೆ ರಜೆಯಿತ್ತು. ಹಾಗಾಗಿ ಇತರ ತರಬೇತುದಾರರು ಯಾರೂ ಬಂದಿರಲಿಲ್ಲ. ಕಾವಲು ಸಿಬಂದಿ ಮತ್ತು ಸ್ವಚ್ಛತಾ ಸಿಬಂದಿ ಮಾತ್ರ ಈಜುಕೊಳ ಸಂಕೀರ್ಣದಲ್ಲಿದ್ದರು. ಬೆಳಗ್ಗೆ ಬೇಗ ಈಜುಕೊಳಕ್ಕೆ ಬಂದಿದ್ದ ಚಂದ್ರಶೇಖರ್ ಅವರು ನಿರ್ವಹಣ ಸಿಬಂದಿ ಬರುವವರೆಗೆ ಈಜಾಡಲು ನಿರ್ಧರಿಸಿ ಕೊಳಕ್ಕೆ ಇಳಿದಿದ್ದರು. ಸ್ವಲ್ಪ ಹೊತ್ತು ಈಜಾಡಿದ ಬಳಿಕ ನೀರಿನಡಿಯಲ್ಲಿ ಈಜುವ ಉದ್ದೇಶದಿಂದ ಕಾವಲು ಸಿಬಂದಿಯ ಬಳಿ ಟೈಮರ್ ಕೊಟ್ಟು ನೀರೊಳಗೆ ಈಜಲಾರಂಭಿಸಿದ್ದರು. 50 ಮೀ. ಉದ್ದದ ಈಜುಕೊಳ ಅದಾಗಿದ್ದು, ಇನ್ನೊಂದು ತುದಿಗೆ ತಲುಪಿದ ಅವರು ಮೇಲಕ್ಕೆ ಬಂದಿಲ್ಲ. ಇದರಿಂದ ಆತಂಕಗೊಂಡ ಕಾವಲು ಸಿಬಂದಿ ನೀರಿಗೆ ಇಳಿದು ಪರಿಶೀಲಿಸಿದಾಗ ಸ್ಪಂದಿಸಿಲ್ಲ.
ತತ್ಕ್ಷಣ ಮೇಲಕ್ಕೆ ತಂದು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.