
ಉಡುಪಿ:ಮಿಷನ್ ಕಂಪೌಂಡ್ ಕ್ವಾಟ್ರಸ್ ನಲ್ಲಿ ಕಳ್ಳತನ ಪ್ರಕರಣ : ಮಧ್ಯಪ್ರದೇಶ ಮೂಲದ ಕುಖ್ಯಾತ ಕಳ್ಳರ ಬಂಧನ, ಸೊತ್ತುಗಳು ವಶ
22/07/2025 03:10 PM
ಉಡುಪಿ: ಉಡುಪಿಯ ಮಿಷನ್ ಕಂಪೌಂಡ್ ನಲ್ಲಿರುವ ಲೋಕೋಪಯೋಗಿ ವಸತಿ ಸಮುಚ್ಚಯದಲ್ಲಿ ಕಳ್ಳತನ ನಡೆಸಿದ ಅಂತರ್ ರಾಜ್ಯ ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ
ಬಂಗಡ ರಮೇಶ್ ಜವಾನ್ ಸಿಂಗ್(37), ಕಾಲಿಯಾ ಕಾಲು(25) ಬಂಧಿತರು.ಇವರು ಮಧ್ಯಪ್ರದೇಶ ಮೂಲದವರಾಗಿದ್ದಾರೆ. ಆರೋಪಿಗಳಿಂದ ಬೆಳ್ಳಿಯ ಆಭರಣಗಳಾದ ಕಾಲು ಗೆಜ್ಜೆ, ಸೊಂಟದ ನೇವಳ, ಕೈಬಳೆ, ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರಾಸ್ಲೈಟ್ ಸೇರಿ ಒಟ್ಟು 80,970 ರೂ. ಮೌಲ್ಯದ 681.830 ಮಿಲಿ ಗ್ರಾಂನ ಬೆಳ್ಳಿಯ ಸೊತ್ತು, 470 ಮಿಲಿಗ್ರಾಂ ಚಿನ್ನ ಹಾಗೂ 1700 ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮಧ್ಯಪ್ರದೇಶ ರಾಜ್ಯದವರಾಗಿದ್ದು, ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ.ಅಲ್ಲದೇ ತಮ್ಮ ಸಹಚರರೊಂದಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿದವರಾಗಿದ್ದಾರೆ. ಇವರ ಮೇಲೆ ಮಹಾರಾಷ್ಟ್ರ ರಾಜ್ಯದಲ್ಲಿ ಸಹ ಪ್ರಕರಣಗಳು ದಾಖಲಾಗಿವೆ.