
ಉಡುಪಿ: 'ಮೋಗ್ ಆನಿಂ ಬಲಿದಾನ್’ ಪುಸ್ತಕ ಲೋಕಾರ್ಪಣೆ
ಉಡುಪಿ: ಸಮಾಜದಲ್ಲಿ ಹೆಚ್ಚು ಹೆಚ್ಚು ಯುವ ಕೊಂಕಣಿ ಸಾಹಿತಿಗಳು ಹುಟ್ಟಿ ಬರಬೇಕಾದ ಅಗತ್ಯವಿದ್ದು ಇದರಿಂದ ಭಾಷೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಮಂಗಳವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಮತ್ತು ಬೆಳ್ಳೆ ವಿಶನ್ ಡೊಟ್ ಕೊಮ್ ಇವರ ಸಹಯೋಗದೊಂದಿಗೆ ಡಾ| ಎವ್ಜಿನ್ ಡಿ’ಸೋಜಾ ಮೂಡುಬೆಳ್ಳೆ ಇವರ ‘ಮೋಗ್ ಆನಿಂ ಬಲಿದಾನ್’ (ಪ್ರೀತಿ ಮತ್ತು ಬಲಿದಾನ) ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿಯಲ್ಲಿ ಕೊಂಕಣಿ ಭಾಷೆಗೆ ವಿಶೇಷ ಪ್ರೋತ್ಸಾಹವಿದ್ದು ಭಾಷೆಯ ಬಗ್ಗೆ ಪ್ರತಿಯೊಬ್ಬರಲ್ಲಿ ಪ್ರೀತಿಯಿದ್ದು ಇದನ್ನು ಇನ್ನಷ್ಟು ಜೀವಂತವಾಗಿರಿಸುವ ಕೆಲಸವನ್ನು ವಿಶನ್ ಕೊಂಕಣಿ ಸಂಸ್ಥೆಯ ಮೂಲಕ ಮಾಡುತ್ತಿದ್ದು ಈ ಮೂಲಕ ಹೊಸ ಸಾಹಿತಿಗಳು ಮೂಡಿಬರುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶನ್ ಕೊಂಕಣಿ ಸ್ಥಾಪಕರು ಮತ್ತು ಪ್ರವರ್ತಕರಾಗಿರುವ ಮೈಕಲ್ ಡಿಸೋಜಾ ಮಾತನಾಡಿ ಎಂದಿಗೂ ನಾವು ಹೆತ್ತ ತಾಯಿ, ಹುಟ್ಟಿದ ಊರು ಮತ್ತು ಮಾತೃ ಭಾಷೆಯನ್ನು ಮರೆಯಬಾರದು. ಪ್ರತಿಯೊಬ್ಬರ ಮನೆಯಲ್ಲಿ ಮಕ್ಕಳಿಗೆ ಕೊಂಕಣಿ ಭಾಷೆಯನ್ನು ಒದಲು ಉತ್ತೇಜಿಸುವ ಕೆಲಸ ಹೆತ್ತವರಿಂದ ನಡೆಯಬೇಕು. ಈ ಮೂಲಕ ಸಮಾಜದಲ್ಲಿ ಕೊಂಕಣಿ ಭಾಷೆ ಸದಾ ಜೀವಂತವಾಗಿರಿಸುವ ಕೆಲಸ ನಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿರಂತರ್ ಕೊಂಕಣಿ ಸಂಘಟನೆ ಉದ್ಯಾವರ ಇವರು ಆಯೋಜಿಸಿರುವ ಮೂರು ದಿನಗಳ ಚಲನಚಿತ್ರ ಪ್ರದರ್ಶನದ ಪೋಸ್ಟರ್ ಅನಾವರಣ ಕಾರ್ಯಕ್ರಮವನ್ನು ಧರ್ಮಾಧ್ಯಕ್ಷರು ನೆರವೇರಿಸಿದರು.
‘ಮೋಗ್ ಆನಿಂ ಬಲಿದಾನ್’ (ಪ್ರೀತಿ ಮತ್ತು ಬಲಿದಾನ) ಪುಸ್ತಕದ ಬರಹಗಾರ ಸಹಯೋಗದೊಂದಿಗೆ ಡಾ| ಎವ್ಜಿನ್ ಡಿ’ಸೋಜಾ ಮೂಡುಬೆಳ್ಳೆ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳ್ಳೆ ವಿಶನ್ ಡೊಟ್ ಕೊಮ್ ಪ್ರವರ್ತಕರಾದ ಎಲಿಯಾಸ್ ಡಿಸೋಜಾ ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಸಂಚಾಲಕರಾದ ವಂ|ಡೆನಿಸ್ ಡೆಸಾ ಸ್ವಾಗತಿಸಿ, ಕಿಟಾಳ್ ಅಂತರ್ಜಾಲ ಮಾಧ್ಯಮದ ಸಂಪಾದಕ ಹೆಚ್ ಎಮ್ ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿ ಸಹಯೋಗದೊಂದಿಗೆ ಡಾ| ಎವ್ಜಿನ್ ಡಿ’ಸೋಜಾ ವಂದಿಸಿದರು.