
ಉಡುಪಿ: ಪೋಕ್ಸೊ ವಿಶೇಷ ಸರಕಾರಿ ಅಭಿಯೋಜಕರ ವಿರುದ್ದ ಜಾತಿನಿಂದನೆ ಪ್ರಕರಣ ದಾಖಲು !
ಉಡುಪಿ: ಜಿಲ್ಲೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈಟಿ.ರಾಘವೇಂದ್ರ ಸೇರಿದಂತೆ ಮನೋಜ್ ಹಾಗು ಸಂಜಯ್ ವಿರುದ್ದ ಮಹಿಳಾ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ವಿಶೇಷ ಸರಕಾರಿ ಅಭಿಯೋಜಕ ಸೇರಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಬ್ರಹ್ಮಾವರದ ಹಾವಂಜೆ ಗ್ರಾಮದ ಕೊಳಲಗಿರಿಯ ನಿವಾಸಿಯಾದ ಸಂತ್ರಸ್ತ ಯುವತಿ ಹಾಗು ಸಂಜಯ್ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಅವಧಿಯಲ್ಲಿ 2024 ರ ಜು.11 ಹಾಗು ನ.17 ರಂದು ಅವರನ್ನು ತಿರುಗಾಡಲೆಂದು ಕರೆದುಕೊಂಡು ಹೋಗಿ, ಖಾಸಗಿ ಹೋಟೆಲಿನಲ್ಲಿ ರೂಮ್ ಮಾಡಿ, ದೈಹಿಕ ಸಂಪರ್ಕ ಬೆಳೆಸಿದ್ದು, ಮದುವೆಯಾಗುವುದಾಗಿ ನಂಬಿಸಿದ್ದರು.
ಆದರೆ ಇತ್ತೀಚೆಗೆ ತನ್ನ ನಂಬರ್ ಬ್ಲಾಕ್ ಮಾಡಿ, ಬೇರೆ ಯುವತಿ ಜೊತೆಗೆ ವಿವಾಹವಾಗಲು ಪ್ರಯತ್ನಿಸುತ್ತಿದ್ದಾನೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ 2025 ರ ಜೂ.30 ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುವತಿಯು ಮಹಿಳಾ ಠಾಣೆಯಲ್ಲಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವೈಟಿ ರಾಘವೇಂದ್ರ ಅವರು ತನ್ನ ಕಚೇರಿಗೆ ಸಂತ್ರಸ್ತ ಯುವತಿಯನ್ನು ಕರೆಸಿ, ಸಂಜಯ್ ವಿರುದ್ಧ ದೂರು ಕೊಟ್ಟರೆ ಸರಿ ಇರುವುದಿಲ್ಲ, ನಿನ್ನ ವಿರುದ್ಧ ಉಡುಪಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕೇಸ್ ಹಾಕುತ್ತೇನೆ ಎಂದು ಗದರಿಸಿದ್ದಾರೆ. ವೈಟಿ ರಾಘವೇಂದ್ರ ಹಾಗು ಮನೋಜ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ಸುಳ್ಳು ದೂರು ನೀಡಿ ವಿಚಾರಣೆಗೆಂದು ಠಾಣೆಗೆ ಕರೆಯಿಸಿ ತೊಂದರೆ ಮಾಡಿದ್ದಾರೆ.
ಇಬ್ಬರು ಸೇರಿಕೊಂಡು ಅತ್ಯಾಚಾರ ಪ್ರಕರಣದ ಆರೋಪಿ ಸಂಜಯ್ ತಲೆಮರೆಸಿಕೊಳ್ಳಲು ಸಹಾಯ ಮಾಡಿ, ಆತನ ವಿರುದ್ದ ದೂರು ದಾಖಲಿಸದಂತೆ ಒತ್ತಡ ಹಾಕಿದ್ದಾರೆ. ಅಲ್ಲದೇ ಉಡುಪಿ ನಗರದ ವೈಟಿ ರಾಘವೇಂದ್ರ ಅವರ ಆಫೀಸಿನಲ್ಲಿ 2017 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೀಳು ಜಾತಿಯವಳೆಂದು ನಿಂದನೆ ಮಾಡುತ್ತಿದ್ದರು. ಮನೆಯಿಂದ ನೀರು ತರಲು ತಿಳಿಸುತ್ತಿದ್ದು, ಊಟ ಮಾಡುವಾಗ ಆಫೀಸಿನ ಇತರ ಸಿಬ್ಬಂದಿಯವರನ್ನು ಹೊರತುಪಡಿಸಿ ತನ್ನನ್ನು ಮಾತ್ರ ಹೊರಗೆ ಕಳುಹಿಸುತ್ತಿದ್ದರು ಎಂದು 2025 ಜು.15 ರಂದು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಮಹಿಳಾ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.