
ಉಡುಪಿ: ಅಪ್ರಾಪ್ತ ಬಾಲಕಿಯ ಅ* ಚಾರ ಪ್ರಕರಣ : ಆರೋಪಿಗೆ 20 ವರ್ಷ ಶಿಕ್ಷೆ , ದಂಡ
ಉಡುಪಿ: ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಪೋಕ್ಸೊ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ ಆದೇಶಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಠಿಣ ಕಾರಗೃಹ ಶಿಕ್ಷೆ ಹಾಗು 25 ಸಾವಿರ ದಂಡ ವಿಧಿಸಿದ್ದು, ನೊಂದ ಬಾಲಕಿಗೆ ಸರಕಾರದಿಂದ 1.50 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಮಂಜುನಾಥ್.ಎನ್ ಗುರತಿಸಲಾಗಿದೆ.
ನೊಂದ ಬಾಲಕಿಯು ಕಾಪು ತಾಲೂಕಿನವಳಾಗಿದ್ದಾಳೆ. ಈತನ ಅಣ್ಣನ ಸ್ನೇಹಿತನಾದ ಆರೋಪಿಯೂ, ಬಾಲಕಿಯನ್ನು ಫೋನ್ನಲ್ಲಿ ಸಂಪರ್ಕಿಸಿ, ಪ್ರೀತಿಸುತ್ತೇನೆ ಎಂದು ನಂಬಿಸಿದ್ದನು. ನಂತರ ತಮ್ಮ ಪ್ರೀತಿಯ ಬಗ್ಗೆ ಅಣ್ಣನಿಗೆ ತಿಳಿಸುವುದಾಗಿ ಬೆದರಿಸುತ್ತಿದ್ದನು.
ಸಂತ್ರಸ್ತೆ ತನ್ನ ಅಜ್ಜಿ ಮನೆಯಾದ ಗದಗ ಜಿಲ್ಲೆಯ ರೋಣ ತಾಲೂಕಿಗೆ ತೆರಳಿದ್ದಾಗ, ಆರೋಪಿಯೂ ಆಕೆಯನ್ನು ಬಲವಂತದಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ದೈಹಿಕ ಸಂಪರ್ಕ ಬೆಳೆಸಿದ್ದನು. ಈ ವಿಚಾರವನ್ನು ಯಾರಿಗಾದರೂ ಹೇಳಿದ್ದಲ್ಲಿ, ತಾನು ವಿಡಿಯೋ ಮಾಡಿದ್ದು, ಅಣ್ಣ ಹಾಗು ಮನೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ.
ನಂತರ ವಿಷಯ ತಿಳಿದ ಬಾಲಕಿಯ ತಾಯಿಯೂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಅಂದಿನ ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲ್ಲಗುಜ್ಜಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಒಟ್ಟು 39 ಸಾಕ್ಷಿಗಳ ಪೈಕಿ ಸಂತ್ರಸ್ತ ಬಾಲಕಿ ಸಹಿತ 16 ಸಾಂದರ್ಭಿಕ ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪಿಯನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಸರಕಾರದ ಪರವಾಗಿ ಪ್ರಧಾನ ಸರಕಾರಿ ಅಭಿಯೋಜಕ ಜಯರಾಂ ಶೆಟ್ಟಿ ಹಾಗು ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ವಾದಿಸಿದ್ದಾರೆ.