
ಉಡುಪಿ ವಕೀಲರ ಸಂಘದಿಂದ ನ್ಯಾಯಮೂರ್ತಿಗಳಿಗೆ ಸನ್ಮಾನ, ಬೀಳ್ಕೊಡುಗೆ
ಉಡುಪಿ: ಉಡುಪಿ ವಕೀಲರ ಸಂಘದ ವತಿಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಿಲ್ಲೆಯ ನೂತನ ಆಡಳಿತಾತ್ಮಕ ನ್ಯಾ| ಜೆ.ಎಂ. ಖಾಝಿ ಅವರನ್ನು ಸ್ವಾಗತಿಸಿ, ಜಿಲ್ಲೆಯ ನಿಕಟಪೂರ್ವ ಆಡಳಿತಾತ್ಮಕ ನ್ಯಾ| ಇ.ಎಸ್.ಇಂದಿರೇಶ್ ಅವರಿಗೆ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.
ನ್ಯಾ| ಇ.ಎಸ್. ಇಂದಿರೇಶ್ ಅವರು ಮಾತನಾಡಿ, ಉಡುಪಿ ವಕೀಲರ ಸಂಘವು, ನ್ಯಾಯಾಧೀಶರ ಪರೀಕ್ಷಾರ್ಥಿಗಳಿಗೆ ಏರ್ಪಡಿಸುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ. ತನ್ನ ಸಂಘದಲ್ಲಿನ ವಕೀಲರು ನ್ಯಾಯಾಧೀಶರಾಗಬೇಕೆಂಬ ದೊಡ್ಡ ಮನಸ್ಸು ಈ ಸಂಘದ ಹಿರಿಯರಿಗಿದೆ. ಇಂತಹ ಹಿರಿಯರು ಏರ್ಪಡಿಸುತ್ತಿರುವ ಕಾರ್ಯಕ್ರಮಗಳೂ ಎಲ್ಲರಿಗೂ ಮಾದರಿ ಎಂದು ಸಂಘದ ಕಾರ್ಯಸಾಧನೆಯನ್ನು ಶ್ಲಾಘಿಸಿದರು.
ಭಾರತದ ಸಂವಿಧಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಕಾನೂನು ಉಲ್ಲಂಘನೆ ಮಾಡದೇ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಕಾರ್ಯನಿರ್ವಹಿಸಬೇಕು. ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನು ಉಲ್ಲಂಘನೆಗೆ ಅವಕಾಶ ನೀಡಬಾರದು. ನಾವೆಲ್ಲರೂ ನಿತ್ಯವೂ ಕಾನೂನು ವಿದ್ಯಾರ್ಥಿಗಳಾಗಿದ್ದು ಕಲಿಕೆ ನಿರಂತರವಾಗಿರಬೇಕು ಎಂದವರು ನುಡಿದರು.
ನ್ಯಾ| ಜೆ.ಎಂ.ಖಾಝಿ ಮಾತನಾಡಿ, ನ್ಯಾಯಾಲಯಕ್ಕೆ ಬರುವ ಪ್ರತಿ ಪ್ರಕರಣದಲ್ಲೂ ಮಾನವೀಯ ಮೌಲ್ಯ ಅಡಗಿರುತ್ತದೆ. ಅದನ್ನು ನಾವು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಉತ್ತಮ ಅಭ್ಯಾಸಗಳನ್ನು ಜೋಡಿಸಿಕೊಳ್ಳುತ್ತಾ ವಾಸ್ತವದ ದತ್ತಾಾಂಶದ ಆಧಾರದಲ್ಲಿ ವಾದ ಮಂಡಿಸಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್.ಎಸ್.ಗಂಗಣ್ಣವರ್ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ, ಸಂಘದ ಕಾರ್ಯ ಚಟುವಟಿಕೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಜಿಲ್ಲಾ ಸರಕಾರಿ ವಕೀಲೆ ಮೇರಿ ಎ.ಆರ್. ಶ್ರೇಷ್ಠಾ ಅವರು ನೂತನ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಯವರ ಪರಿಚಯ ಮಾಡಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ್ ಪ್ರಸ್ತಾವಿಕ ಮಾತನಾಡಿದರು. ಸಂಘದ ಕಾರ್ಯದರ್ಶಿ ರಾಜೇಶ್ ಎ.ಆರ್.ವಂದಿಸಿದರು. ನ್ಯಾಯವಾದಿ ರಾಜಶೇಖರ್ ಶ್ಯಾಮರಾಮ್ ನಿರೂಪಿಸಿದರು. ಇದೇ ವೇಳೆ ಜಿಲ್ಲೆಯ ಎಲ್ಲ ನ್ಯಾಯಧೀಶರು ಸೇರಿ ಹೈಕೋರ್ಟ್ನ ಈರ್ವರು ನ್ಯಾಯಮೂರ್ತಿಗಳಿಗೆ ಸನ್ಮಾನಿಸಿದರು.