
ಉಡುಪಿ:ಗಣತಿ ವೇಳೆ ಮುಸ್ಲಿಮರು ವೃತ್ತಿ ಆಧಾರಿತ ವರ್ಗ/ಪಂಗಡ ನಮೂದಿಸಿ: ಉಡುಪಿ ಸಂಯುಕ್ತ ಖಾಝಿ ಮಾಣಿ ಉಸ್ತಾದ್
ಉಡುಪಿ : ಜಾತಿ ಗಣತಿಗೆ ಸಂಬಂಧಿಸಿದಂತೆ ಸಮುದಾಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸುನ್ನೀ ಜಮ್ಇಯ್ಯತುಲ್ ಉಲಮಾ ಕರ್ನಾಟಕದ ಅಧ್ಯಕ್ಷ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಸ್ಪಷ್ಟನೆ ನೀಡಿದ್ದಾರೆ.
ಮುಸ್ಲಿಮರಲ್ಲಿ ಜಾತಿ-ಉಪಜಾತಿಗಳಿಲ್ಲದಿದ್ದರೂ, ವೃತ್ತಿ ಆಧಾರಿತ ವರ್ಗಗಳನ್ನು ಗುರುತಿಸುವುದು ಮೀಸಲಾತಿ ಸವಲತ್ತು ಪಡೆಯಲು ಅಗತ್ಯವೆಂದು ಹೇಳಿದ್ದಾರೆ.
ಸರಕಾರವು ವೃತ್ತಿ ಆಧಾರಿತವಾಗಿ ಸಮುದಾಯಗಳಲ್ಲಿರುವ ಅನೇಕ ವರ್ಗ/ಪಂಗಡಗಳನ್ನು ಗುರುತಿಸಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಅಭಿವೃದ್ಧಿಯತ್ತ ತರಲು ಮೀಸಲಾತಿ ನೀಡುತ್ತದೆ. ಪ್ರಸ್ತುತ ನಡೆಯುತ್ತಿರುವ ಜಾತಿ ಗಣತಿಯೂ ಇದೇ ಉದ್ದೇಶವನ್ನು ಹೊಂದಿದೆ. ಆದ್ದರಿಂದ ಜನಗಣತಿಯ ವೇಳೆ ಮುಸ್ಲಿಂ ಸಮಾಜದಲ್ಲಿರುವವರು ತಮ್ಮ ವೃತ್ತಿ ಆಧಾರಿತ ವರ್ಗ/ಪಂಗಡದ ಹೆಸರನ್ನು (ಉದಾ: ಬ್ಯಾರಿ, ಕೊಡವ, ಕಸಬ್, ಕಸಾಯಿ) ಉಪಜಾತಿ ಕಾಲಮ್ನಲ್ಲಿ ನಮೂದಿಸಬಹುದು.ಇದರಿಂದ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.
ಇಂತಹ ಯಾವುದೇ ವರ್ಗ/ಪಂಗಡಗಳಿಗೆ ಸೇರದವರು ಆ ಕಾಲಮ್ ಅನ್ನು ಖಾಲಿ ಬಿಡಬಹುದಾಗಿದೆ. ಈ ಕುರಿತು ಸಮಗ್ರ ಮಾಹಿತಿಯನ್ನು ಪಡೆಯಲಾಗಿದ್ದು ಯಾವುದೇ ಗೊಂದಲಗಳ ಅಗತ್ಯವಿರುವುದಿಲ್ಲ ಎಂದು ಖಾಝಿ ಎಂ.ಅಬ್ದುಲ್ ಹಮೀದ್ ಹೇಳಿದ್ದಾರೆ.